ರಾಮನಗರವನ್ನು ದೆಹಲಿ ಎಂದು ಬೇಕಾದರೆ ಮಾಡಲಿ: ಡಿಕೆಶಿಗೆ ಕುಮಾರಸ್ವಾಮಿ ವ್ಯಂಗ್ಯ | JANATA NEWS
![](2023/November/Jimg/1699628818.jpg)
ರಾಮನಗರ : ಬಿಡದಿಯನ್ನು ಗ್ರೇಟರ್ ಬೆಂಗಳೂರು ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಅಲ್ಲದಿದ್ದರೆ ದೆಹಲಿ ಎಂದು ಬೇಕಾದರೆ ಮರುನಾಮಕರಣ ಮಾಡಲಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈಗ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಹೊರಟಿದ್ದೀರಿ. ಈ ಮೂಲಕ ಬೆಂಗಳೂರು ಬ್ರ್ಯಾಂಡ್ ಹೆಸರನ್ನು ವಿಸ್ತರಣೆ ಎಂದು ಹೇಳುತ್ತಿದ್ದಾರೆ. ಬೆಂಗಳೂರು ಬ್ರ್ಯಾಂಡ್ ಬೆಂಗಳೂರು ಮಾಡುತ್ತಿದ್ದೀರಾ? ಕಸದ ರಾಶಿ ಇದು ಎಂದು ಫೋಟೋ ತೋರಿಸಿ, ಇದು ನಿಮ್ಮ ಬ್ರ್ಯಾಂಡ್ ಬೆಂಗಳೂರಾ ಎಂದು ಡಿಕೆಶಿಗೆ ಟಾಂಗ್ ನೀಡಿದ್ದಾರೆ.
ರಾಮನಗರವನ್ನು ಬೆಂಗಳೂರು ಮಾಡುವುದು ಬೇಡ, ದೆಹಲಿ ಅಥವಾ ದುಬೈ ಎಂದು ಹೆಸರಿಡಿ. ಹೆಸರು ಬದಲಾವಣೆ ಮಾಡುವುದರಿಂದ ಯಾರೂ ಬರುವುದಿಲ್ಲ. ನೀವು ಯಾವ ಮೂಲಭೂತ ಸೌಕರ್ಯ ಕೊಡುತ್ತೀರಿ, ಅಭಿವೃದ್ಧಿ ಮಾಡುತ್ತೀರಿ ಅದರ ಮೇಲೆ ಜನಬರುತ್ತಾರೆ. ಅವರಿಗೆ ಬೇರೆ ಕೆಲಸ ಇಲ್ಲ, ಜನರ ಕೆಲಸ ಮಾಡಲ್ಲ. ಜನರ ಗಮನ ಸೆಳೆಯಲು ಹೀಗೆ ಮಾತನಾಡುತ್ತಾರೆ ಎಂದರು.
ಬಿಡದಿಯಲ್ಲಿ ಜಪಾನ್ ಟೌನ್ ಶಿಪ್ ತರುವ ಯೋಜನೆ ಇತ್ತು. ಕಾಂಗ್ರೆಸ್ ಯಾಕೆ ತಂದಿಲ್ಲ? ಯಾರು ಜಮೀನು ಮಾರಬೇಡಿ ಎನ್ನುತ್ತಿದ್ದಾರೆ. ಕನಕಪುರದಲ್ಲಿ 50 ಎಕ್ರೆ ಜಾಗದಲ್ಲಿ ಮೆಗಾ ಡೈರಿ ಆರಂಭಿಸಿದ್ದೀರಿ. ಈ ಡೈರಿಗೆ ಜಾಗ ನೀಡಿದ ರೈತರಿಗೆ ಎಷ್ಟು ಕೊಟಿದ್ದೀರಿ? ರೈತರಿಗೆ 50 ಸಾವಿರ ರೂ. ನಿಂದ 1 ಲಕ್ಷ ರೂ. ಪರಿಹಾರ ಧನ ಕೊಟ್ಟಿದ್ದಾರೆ. ಆದರೆ ಡಿಕೆಶಿ ಪಟಾಲಂನವರು 55 ಲಕ್ಷ ರೂ. ಪರಿಹಾರ ತೆಗೆದುಕೊಳ್ಳುತ್ತಾರೆ. ಇದು ಇವರ ಇತಿಹಾಸ ಎಂದು ಕಿಡಿಕಾರಿದರು.