ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಳಕ್ಕೆ ಸಹಾಯಕಾರಿಯಾಗಿದ್ದ ನಮ್ಮ ಮೆಟ್ರೊ ದರ 50% ಹೆಚ್ಚಳ : ಹಿಂಪಡೆಯಲು ಆರ್. ಅಶೋಕ ಒತ್ತಾಯ | JANATA NEWS

ಬೆಂಗಳೂರು : ವಾಯು ಮಾಲಿನ್ಯ ತಡೆಗೆ ಹಾಗೂ ಸಾರ್ವಜನಿಕ ಸಾರಿಗೆ ಹೆಚ್ಚಳಕ್ಕೆ ಸಾಕಷ್ಟು ಸಹಾಯಕಾರಿಯಾಗಿದ್ದ, ನಮ್ಮ ಮೆಟ್ರೊ ಪ್ರಯಾಣ ದರವನ್ನು ಒಮ್ಮೆಲೇ 50% ಹಚ್ಚಿಸಿರುವ ನಿರ್ಧಾರದ ವಿರುದ್ಧ ಸಾಕಷ್ಟು ಜನಾಕ್ರೋಶ ವ್ಯಕ್ತವಾಗಿದೆ. ಪೆಟ್ರೋಲ್, ಡೀಸೆಲ್, ವಿದ್ಯುತ್ ದರ, ಹಾಲು, ಬಸ್ಸು ದರ ಏರಿಕೆಯ ಬಳಿಕ ಈಗ ನಮ್ಮ ಮೆಟ್ರೊ ದರವನ್ನೂ ಸಹ ಹೆಚ್ಚಿಸಿರುವುದು ಜನ ರಾಜ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಈ ನಿರ್ಧಾರವನ್ನು ಹಿಂಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, "ಪೆಟ್ರೋಲ್, ಡೀಸೆಲ್, ಹಾಲು, ಬಸ್ಸು ದರ ಏರಿಕೆಯ ಬರೆಯಿಂದ ಈಗಾಗಲೇ ಹೈರಾಣಗಿರುವ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ಮೆಟ್ರೋ ದರವನ್ನ ಏಕಾಏಕಿ 50% ಏರಿಸುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ."
"ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಮೆಟ್ರೋ ದರ 50% ಏರಿಕೆ ಮಾಡಿರುವುದರಿಂದ ಅನೇಕ ಜನಸಾಮಾನ್ಯರಿಗೆ ಈಗ ಮೆಟ್ರೋ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದ್ದು. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಜನರನ್ನು ಮೆಟ್ರೋದಿಂದ ವಿಮುಖರಾಗುವಂತೆ ಮಾಡುತ್ತಿದೆ. ಈ ಕೊಡಲೇ ಮೆಟ್ರೋ ದರ ಏರಿಕೆಯ ನಿರ್ಧಾರವನ್ನ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುತ್ತೇನೆ.", ಎಂದು ಆರ್. ಅಶೋಕ ಒತ್ತಾಯಿಸಿದ್ದಾರೆ.