ಶ್ರೀ ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ದೇಗುಲ | Janata news
ಬೆಂಗಳೂರು : ಶಿವಲಿಂಗದ ಮೇಲೆ ನೀರು ಬೀಳುವುದು ಹಾಗೂ ಲಿಂಗದ ಎದುರು ಕಲ್ಯಾಣಿ ಇರುವುದು ಈ ದೇಗುಲದ ವಿಶೇಷ. ತಗ್ಗು ಪ್ರದೇಶದಲ್ಲಿರುವ ಈ ದೇಗುಲ ಅನೇಕ ವಿಸ್ಮಯಗಳನ್ನು ಒಳಗೊಂಡಿದೆ. ಬೆಂಗಳೂರು ಮಲ್ಲೇಶ್ವರಂನ 15ನೇ ಅಡ್ಡರಸ್ತೆ ವ್ಯಾಪ್ತಿಯಲ್ಲಿರುವ ಈ ದೇಗುಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನದಲ್ಲಿ 7000 ವರ್ಷಗಳಿಂದ ನಂದಿಯ ಬಾಯಿಂದ ನೀರು ಬರಿದು ಬರುತ್ತಲಿದೆ. ನೀರು ಎಲ್ಲಿಂದ ಬರುತ್ತಿದೆ ಎಂಬುವುದನ್ನು ಯಾರೂ ಕಂಡುಹಿಡಿಯಲು ಸಾಧ್ಯವಿಲ್ಲ.
ದೇಗುಲದ ಇತಿಹಾಸ
ಗೌತಮ ಮಹರ್ಷಿಗಳ ಅನುಮತಿಯಂತೆ ವೃಷಭಾವತಿ ನದಿಯು ಬಸವನ ಬಾಯಿಂದ ಆವಿರ್ಭವಿಸಿದಳು. ಹಾಗಾಗಿಯೇ ಬಸವನ ಬಾಯಲ್ಲಿ ವರ್ಷವಿಡೀ ನೀರು ಜಿನುಗುತ್ತದೆ ಎಂಬ ಪುರಾಣವಿದೆ. ನಂದಿಯ ಬಾಯಿಂದ ಬರುವ ನೀರಲ್ಲಿ ರೋಗ ನಿವಾರಕ ಶಕ್ತಿ ಅಡಗಿದೆ. ಈ ನೀರನ್ನು ಮೈಗೆ ಸೋಕಿಕೊಂಡರೆ ಅನೇಕ ರೋಗಗಳು ಗುಣಮುಖವಾಗುತ್ತದೆ ಎನ್ನುವ ಪ್ರತೀತಿ ಇದೆ.
ಶಿವಲಿಂಗವನ್ನು ನಾಗಾಭರಣಗಳಿಂದ ಅಲಂಕರಿಸಲಾಗುತ್ತದೆ. ರಾತ್ರಿಯ ದೀಪಾಲಂಕಾರ ಬಹಳ ವಿಶೇಷವಾಗಿರುತ್ತದೆ. ದೇಗುಲದಲ್ಲಿರುವ ಕೆತ್ತನೆಗಳು, ಪ್ರವೇಶ ದ್ವಾರದ ಗೋಪುರಗಳು ಹಾಗೂ ಗೋಪುರದ ಮೇಲಿರುವ ನಂದಿ, ಶಿವ-ಪಾರ್ವತಿಯ ಮೂರ್ತಿಗಳು ಮನಮೋಹಕವಾಗಿವೆ. ದೇಗುಲದ ಆರಂಭದಲ್ಲೇ ಗಣಪತಿ ವಿಗ್ರಹವನ್ನು ಇಡಲಾಗಿದೆ. ದೇಗುಲದ ಎದುರಲ್ಲಿರುವ ಸುಂದರ ಕಲ್ಯಾಣಿ ಹಾಗೂ ಅದರಲ್ಲಿರುವ ಆಮೆಗಳ ವಾಸ ವಿಶೇಷವಾದದ್ದು.