ದಭೆ ದಭೆ ಫಾಲ್ಸ್ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕರಿಬ್ಬರು ನೀರುಪಾಲು | Janata news
ಯಾದಗಿರಿ : ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ನಜರಾಪುರ ಸಮೀಪದ ದಭೆ ದಭೆ ಜಲಪಾತದಲ್ಲಿ ಮತ್ತೆ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಹೈದ್ರಾಬಾದ್ ನ ಗಾಜಿಬಂಡಾ ನಿವಾಸಿಗಳಾದ ಅಬ್ದುಲ್ ರಹೀಂ ಹಾಗೂ ಅದ್ನಾನ್ ಅವರು ನೀರು ಪಾಲಾಗಿ ಬಲಿಯಾಗಿದ್ದಾರೆ.
ಓರ್ವ ಯುವಕನಾದ ಇಬ್ರಾಹಿಂನನ್ನು ನೀರಿನಲ್ಲಿ ಮುಳುಗುತ್ತಿರುವಾಗ ಸ್ಥಳೀಯರು ರಕ್ಷಣೆ ಮಾಡಿದ್ದು, ಇಬ್ರಾಹಿಂ ಸಾವಿನದವಡೆಯಿಂದ ಪಾರಾಗಿ ಬಂದಿದ್ದಾನೆ. ಆತನನ್ನು ಗುರುಮಠಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೈದ್ರಾಬಾದ್ ನಿಂದ ಗುರುಮಠಕಲ್ ಪಟ್ಟಣಕ್ಕೆ ಸಂಬಂಧಿಕರ ಮನೆಗೆ ಕೆಲ ಯುವಕರು ಬಂದಿದ್ದರು.
ಮದುವೆ ಮುಗಿಸಿಕೊಂಡು ಸಮೀಪದಲ್ಲಿರುವ ಜಲಪಾತ ಇರುವ ಬಗ್ಗೆ ಮಾಹಿತಿ ಸ್ಥಳೀಯರಿಂದ ಪಡೆದು, ನಂತರ ಐದು ಜನ ಯುವಕರ ತಂಡವು ನಜರಾಪುರಗೆ ತೆರಳುವ ರಸ್ತೆ ಭಾಗದ ಸ್ವಲ್ಪ ಮುಂದೆ ಹೋಗಿ ಜಲಪಾತ ವೀಕ್ಷಣೆ ಮಾಡಿದ್ದಾರೆ.
ನಂತರ ಜಲಪಾತದ ಸೊಬಗು ಕಣ್ಣು ತುಂಬಿಕೊಳ್ಳಲು ಬೆಟ್ಟದ ಕೆಳಭಾಗದ ಜಲಪಾತದ ತಗ್ಗು ಪ್ರದೇಶಕ್ಕೆ ಆಗಮಿಸಿ ಖುಷಿಯಾಗಿ ನೋಡಿದ್ದಾರೆ. ನಂತರ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.