ಎರಡನೇ ಮದುವೆ ಗುಟ್ಟು ಮಗಳನ್ನೇ ಕೊಂದು ಸಮಾಧಿ ಮಾಡಿದ ತಂದೆ! | Janata news
ದಾವಣಗೆರೆ : ಎರಡನೇ ಮದುವೆಯ ಗುಟ್ಟು ಬಯಲಾಗುತ್ತದೆ ಎಂಬ ಕಾರಣಕ್ಕೆ ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಎರಡೂವರೆ ವರ್ಷದ ಹೆಣ್ಣು ಮಗುವನ್ನು ತಂದೆಯೇ ಕೊಲೆ ಮಾಡಿರುವ ಪ್ರಕರಣ ಒಂದು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗುತ್ತಿದುರ್ಗದ ನಿಂಗಪ್ಪ ಕೊಲೆ ಆರೋಪಿ. ಈತನಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದರೂ ಗುತ್ತಿದುರ್ಗದ ಶಶಿಕಲಾಳನ್ನು ಎರನೇ ಮದುವೆಯಾಗಿದ್ದ. 2ನೇ ಹೆಂಡತಿಗೆ ಜನಿಸಿದ ಮಗಳನ್ನೇ ಹತ್ಯೆ ಮಾಡಿದ್ದಾನೆ.
ತನ್ನ 3 ವರ್ಷದ ಮಗು ನಾಪತ್ತೆಯಾಗಿದೆ ಎಂದು ಇಪ್ಪತ್ತು ದಿನಗಳ ಹಿಂದೆಯೇ ಶಶಿಕಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಾಗ ಗುತ್ತಿದುರ್ಗ ಗ್ರಾಮಸ್ಥರಿಂದ ಮಗುವನ್ನು ಸಮಾಧಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಚಿತ್ರದುರ್ಗ ಮತ್ತು ದಾವಣಗೆರೆ ಪೊಲೀಸ್ ಅಧಿಕಾರಿಗಳು ಗುತ್ತಿದುರ್ಗಕ್ಕೆ ಭೇಟಿ ನೀಡಿ, ಮಗುವಿನ ತಂದೆ ನಿಂಗಪ್ಪನನ್ನು ವಿಚಾರಣೆಗೆ ಒಳಪಡಿಸಿದ್ದರು.
ಮೊದಲ ಮದುವೆಗೂ ಮೊದಲೇ ನಿಂಗಪ್ಪನಿಗೆ ಎರಡನೇ ಹೆಂಡತಿ ಜೊತೆ ಪ್ರೇಮ ಸಂಬಂಧವಿತ್ತು. ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದ ನಿಂಗಪ್ಪ ಹಾಗೂ ಶಶಿಕಲಾ ಇತ್ತೀಚೆಗೆ ಗುಟ್ಟಾಗಿ ಮದುವೆಯಾಗಿದ್ದರು. ಶಶಿಕಲಾ ಚಿತ್ರದುರ್ಗದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಕುಟುಂಬಸ್ಥರಿಗೆ ಗೊತ್ತಿಲ್ಲದಂತೆ ಮದುವೆಯಾಗಿದ್ದರು. ಎರಡನೇ ಹೆಂಡತಿ ಶಶಿಕಲಾ ನಿಂಗಪ್ಪನಿಗೆ ದೂರದಿಂದ ಸಂಬಂಧದಲ್ಲಿ ತಂಗಿಯಾಗಬೇಕು.
ಎರಡನೇ ಹೆಂಡತಿ ಶಶಿಕಲಾಳ ಮಗಳು ತನಗೆ ಅಪ್ಪ ಎಂದು ಕರೆಯುತ್ತಿದ್ದುದನ್ನು ನೋಡಿ, ಎರಡನೇ ಮದುವೆಯ ವಿಚಾರ ಬಯಲಿಗೆ ಬರುತ್ತದೆ ಎಂಬ ಆತಂಕದಿಂದ ಮಗುವನ್ನು ಆರೋಪಿ ಕೊಂದಿದ್ದಾನೆ.