ಕಾಡಾನೆಯೊಂದು ರೈಲ್ವೆ ತಡೆಗೋಡೆಗೆ ಸಿಲುಕಿ ಸಾವು! | Janata news
ಚಾಮರಾಜನಗರ : ಆಹಾರ ಅರಸಿ ನಾಡಿನೆಡೆಗೆ ಬರುತ್ತಿದ್ದ ಕಾಡಾನೆಯೊಂದು ರೈಲ್ವೆ ತಡೆಗೋಡೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಲೆಯೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ರೈಲು ಕಂಬಿ ದಾಟಲು ಹೋದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಂಡೀಪುರ ಅಭಯಾರಣ್ಯದ ಮೊಳೆಯೂರು ವಲಯ ನಡಹಾಡಿಯ ಸಮೀಪದ ಅರಣ್ಯದಿಂದ ಆನೆಗಳು ಹೊರಬರದಂತೆ ರೈಲ್ವೆ ಕಂಬಿಯನ್ನು ಅಳವಡಿಸಲಾಗಿದೆ.
ಕಂಬಿ ನಡುವೆ ಸೊಂಡಿಲು ಹೊರ ಹಾಕಿ ದಾಟುವ ಪ್ರಯತ್ನ ಮಾಡಿದ್ದು ಈ ವೇಳೆ ಬಹುಶಃ ಜಾರಿ ಬಿದ್ದು ಕೋರೆ ಮತ್ತು ಸೊಂಡಿಲು ಕಂಬಿಗೆ ಸಿಲುಕಿದ್ದರಿಂದ ಮೇಲೇಳಲು ಸಾಧ್ಯವಾಗದೆ ಉಸಿರುಕಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದೆ ಎನ್ನಲಾಗಿದೆ
ಸಾವನಪ್ಪಿರುವ ಆನೆಗೆ ಸುಮಾರು 10ರಿಂದ 14 ವರ್ಷ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಹುಲಿ ಯೋಜನೆಯ ನಿರ್ದೇಶಕ ಎಸ್.ಆರ್.ನಟೇಶ್, ಎಸಿಎಫ್ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪಶುವೈದ್ಯ ಡಾ.ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಆನೆಯ ಅಂತ್ಯಸಂಸ್ಕಾರ ಮಾಡಲಾಗಿದೆ.