ರಸ್ತೆ ಬದಿ ಹೊಟೇಲ್ಗೆ ನುಗ್ಗಿದ ಕಂಟೈನರ್ ಲಾರಿ, ನಾಲ್ವರು ಸಾವು | Janata news
ಚಿಕ್ಕಬಳ್ಳಾಪುರ : ನಗರ ಹೊರವಲಯದ ಚದುಲಪುರ ಕ್ರಾಸ್ ನಲ್ಲಿ ಗುರುವಾರ ಬೆಳಿಗ್ಗೆ ಕಂಟೈನರ್ ಲಾರಿಯೊಂದು ಹೆದ್ದಾರಿ ಬದಿ ನಿಂತಿದ್ದ ಎರಡು ಕಾರು, ಒಂದು ಬೈಕ್ಗೆ ಡಿಕ್ಕಿ ಹೊಡೆದು ಹೊಟೇಲ್ಗೆ ನುಗ್ಗಿದ ಘಟನೆಯಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ.
ವೇಗವಾಗಿ ಬಂದ ಕಂಟೈನರ್ ಲಾರಿ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಿರುವು ಪಡೆಯುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಒಡೆದು ನಂತರ ಹೊಟೇಲ್ಗೆ ನುಗ್ಗಿದ ಪರಿಣಾಮ ಟೀ ಕುಡಿಯುತ್ತಿದ್ದ ಮೂವರು ಹಾಗೂ ಕಾರಿನಲ್ಲಿದ್ದ ಒಬ್ಬರು ಮೃತಪಟ್ಟಿರುವ ಘಟನೆ ಹೊರವಲಯದ ಚದಲಪುರ ಕ್ರಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಅಪಘಾತದಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಗವಿಗಾನಹಳ್ಳಿ ನಿವಾಸಿಗಳಾದ ವಕೀಲ ಯಮುನಾಚಾರ್ (44), ಚಿಕ್ಕಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಗುಮಾಸ್ತ ಎಚ್.ವಿ.ವೆಂಕಟೇಶ್ (45), ಟಾಟಾ ನೆಕ್ಸಾನ್ ಕಾರಿನಲ್ಲಿದ್ದ ಬೆಂಗಳೂರಿನ ಬಾಣಸವಾಡಿ ನಿವಾಸಿ ಕಲಾಂಜಿಯಂ (47), ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗಪುರದ ನಿವಾಸಿ ನಿತೇಶ್ ಗೌಡ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಗೇಪಲ್ಲಿ ಕಡೆಯಿಂದ ಬಂದ ಕಾರು ಚಿಕ್ಕಬಳ್ಳಾಪುರ ಕಡೆಗೆ ತಿರುವು ಪಡೆದುಕೊಳ್ಳುವಾಗ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕಂಟೈನರ್ ಲಾರಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಹೊಟೇಲ್ಗೆ ನುಗ್ಗಿದೆ.
ಈ ಸಂದರ್ಭದಲ್ಲಿ ಟೀ ಕುಡಿಯಲು ನಿಂತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಕಾರಿನಲ್ಲಿದ್ದ ಯಮುನಾಚಾರಿಯೂ ಸಹ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ 6 ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕಂಟೇನರ್ ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.