ಲಂಚ ಪ್ರಕರಣ: ಡಿವೈಎಸ್ಪಿ ವಿಜಯಲಕ್ಷ್ಮಿಗೆ 4 ವರ್ಷ ಜೈಲು ಶಿಕ್ಷೆ! | Janata news
ಕಲಬುರ್ಗಿ : ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಪೊಲೀಸ್ ಅಧಿಕಾರಿ ವಿಜಯಲಕ್ಷ್ಮಿ ಮಸಾರೆ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಸೆಷನ್ಸ್ ಕೋರ್ಟ್ ಆದೇಶಿಸಿದೆ.
2015 ರಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಅಂದಿನ ಶಹಾಬಾದ್ ಸಿಪಿಐ ವಿಜಯಲಕ್ಷ್ಮಿ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರುಪಾಯಿ ದಂಡ ವಿಧಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಜೆ.ಸತೀಶ್ ಸಿಂಗ್ ತೀರ್ಪು ನೀಡಿದ್ದಾರೆ.
2015ರ ಡಿಸೆಂಬರ್ನಲ್ಲಿ ಶಹಾಬಾದ್ ತಾಲ್ಲೂಕಿನ ದೇವನ ತೇಗನೂರಿನ ರಾಜು ಅವರು ಶಹಾಬಾದ್ನ ಬಂಕ್ವೊಂದರಲ್ಲಿ ತಮ್ಮ ಟಾಟಾ ಸುಮೊ ವಾಹನಕ್ಕೆ ಡೀಸೆಲ್ ಹಾಕಿಸಲು ಹೋಗಿದ್ದ ಸಂದರ್ಭದಲ್ಲಿ ಬಂಕ್ನ ಸಿಬ್ಬಂದಿಯೊಂದಿಗೆ ಜಗಳವಾಗಿತ್ತು. ಟಾಟಾ ಸುಮೋ ವಾಹನ ಮಾಲೀಕ ರಾಜು ಎಂಬಾತನ ಬಳಿ ಸಿಪಿಐ ವಿಜಯಲಕ್ಷ್ಮಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಲಂಚ ರೂಪದಲ್ಲಿ 25 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ವಿಜಯಲಕ್ಷ್ಮಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಈ ವಿಷಯವನ್ನು ಲೋಕಾಯುಕ್ತರ ಗಮನಕ್ಕೆ ತಂದಿದ್ದ ರಾಜು, ಲೋಕಾಯುಕ್ತ ಪೊಲೀಸರ ಸಲಹೆಯಂತೆ ಲಂಚದ ಹಣ ಕೊಡಲು ಮುಂದಾಗಿದ್ದರು. ವಿಜಯಲಕ್ಷ್ಮಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ್ದ ಸಿಬ್ಬಂದಿ ಹಣದ ಸಮೇತ ವಶಕ್ಕೆ ಪಡೆಯಲಾಗಿತ್ತು.
ಲೋಕಾಯುಕ್ತ ಪರ ಸರ್ಕಾರಿ ಅಭಿಯೋಜಕ ಅಶೋಕ್ ಚಾಂದಕವಟೆ ವಾದ ಮಂಡಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶರು ತಮ್ಮ ತೀರ್ಪನ್ನು ಪ್ರಕಟಿಸಿದ್ದಾರೆ. ಲಂಚ ಸ್ವೀಕಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.