ರೌಡಿ ಮುಷ್ಯಾ ಕೋತಿ ದಾಳಿಯಿಂದ ಬಚಾವ್ ಆದ ಶಾಸಕ ರೇಣುಕಾಚಾರ್ಯ! | Janata news
ದಾವಣಗೆರೆ : ಕೋತಿಯ ದಾಳಿಯಿಂದ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಪಾರಾಗಿರುವ ಘಟನೆ ಹೊನ್ನಾಳಿ ಪಟ್ಟಣದ ತಾಲೂಕು ಆಸ್ಪತ್ರೆ ಬಳಿ ನಡೆದಿದೆ.
ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಸರ್ಕಾರಿ ಅಸ್ಪತ್ರೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಲ್ಲಿದ್ದ ಶಾಸಕರು ಹಾಗೂ ನೆರೆದಿದ್ದವರ ಮೇಲೆ ಅಲ್ಲಿದ್ದ ಮಂಗವೊಂದು ಏಕಾಏಕಿ ದಾಳಿ ಮಾಡಿದೆ.
ಈ ಮಂಗನಿಂದ ಪಾರಾಗಲು ರೇಣುಕಾಚಾರ್ಯ ಹರಸಾಹ ಪಟ್ಟಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಆಸ್ಪತ್ರೆಯ ಒಳಗೆ ಉಳಿದುಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ತೊಂದರೆಯಾಗದೆ ಅಲ್ಲಿಂದ ಪಾರಾಗಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ಮಂಗ ಸ್ಥಳೀಯರಿಗೆ ಕಾಟ ಕೊಡುತ್ತಿದ್ದು, ಇದುವರೆಗೂ ಸುಮಾರು 30ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದೆ. ಮಕ್ಕಳನ್ನು ರಸ್ತೆಗೆ ಬಿಡಲೂ ಜನರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣ, ಪುರಸಭೆ, ದುರ್ಗಿಗುಡಿ, ಟಿ.ಬಿ.ಸರ್ಕಲ್ ಪ್ರದೇಶದಲ್ಲಿ ಈ ಕೋತಿ ನಿತ್ಯ ಸಂಚರಿಸುತ್ತದೆ. ಕೋತಿಯನ್ನು ಕಂಡರೆ ಜನರು ಭೀತಿಯಿಂದ ಓಡಿ ಹೋಗ್ತಾರೆ.
ಸ್ಥಳೀಯರು ಈ ಮಂಗನಿಗೆ ರೌಡಿ ಮುಷ್ಯಾ ಎಂದೇ ಹೆಸರಿಟ್ಟಿದ್ದು, ಕೆಲ ದಿನಗಳ ಹಿಂದೆ ಬೈಕ್ ಸವಾರನ ಮೇಲೆ ಮುಷ್ಯಾ ದಾಳಿ ನಡೆಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅರಣ್ಯ ಅಧಿಕಾರಿಗಳು ರೌಡಿ ಮುಷ್ಯಾ ಹಿಡಿಯಲು ವಿಫಲ ಯತ್ನ ನಡೆಸಿದ್ದಾರೆ. ಬಲೆ ತೆಗೆದುಕೊಂಡು ಬಂದು ಹಿಡಿದರೂ ಸಾಧ್ಯವಾಗುತ್ತಿಲ್ಲ. ಕೋತಿಗೆ ಅರವಳಿಕೆ ಮದ್ದು ನೀಡಿದರೆ ಮಾತ್ರ ಅವುಗಳನ್ನು ಹಿಡಿಯಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು.