ಸಂಬಳ ನೀಡುವಲ್ಲಿ ವ್ಯತ್ಯಯವಾಗಿರುವುದನ್ನ ಒಪ್ಪಿಕೊಂಡ ವಿಸ್ಟ್ರಾನ್: ಕಂಪನಿಯ ಉಪಾಧ್ಯಕ್ಷನ ತಲೆದಂಡ | Janata news
ಕೋಲಾರ : ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಇತ್ತೀಚೆಗೆ ನಡೆದ ಭಾರೀ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್ ಲೀ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ವೇತನ ನೀಡಿಲ್ಲವೆಂದು ಆರೋಪಿಸಿ ಡಿಸೆಂಬರ್ 12 ರಂದು ಐಫೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ಮೇಲೆ ಕಾರ್ಮಿಕರು ಕಲ್ಲು ತೂರಾಟ ನಡೆಸಿ, ಕಾರ್ಗಳು ಮತ್ತು ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಸಾವಿರಾರು ದುಬಾರಿ ಐಫೋನ್ಗಳನ್ನು ಲೂಟಿ ಮಾಡಲಾಗಿದ್ದು ಇದರಿಂದಾಗಿ ಸಂಸ್ಥೆಗೆ 437 ಕೋಟಿ ರೂ ನಷ್ಟವಾಗಿದೆ ಎನ್ನಲಾಗಿತ್ತು.
ಸಂಸ್ಥೆಯ ಆಡಳಿತ ಮಂಡಳಿ ತನ್ನ ತಪ್ಪೊಪ್ಪಿಕೊಂಡಿದ್ದು ಇಂದು ಬಿಡುಗಡೆ ಮಾಡಿರುವ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಈ ಕುರಿತು ನೌಕರರ ಬಳಿ ಕ್ಷಮೆ ಸಹ ಯಾಚಿಸಿದೆ ಎಂದು ತಿಳಿದುಬಂದಿದೆ. ಜೊತೆಗೆ, ನರಸಾಪುರದಲ್ಲಿರುವ ತನ್ನ ಕಾರ್ಖಾನೆಯನ್ನು ವಿಸ್ತರಿಸುತ್ತಿರುವ ವೇಳೆ ಕಾರ್ಮಿಕರ ವೇತನ ಮತ್ತು ಇತರೆ ವ್ಯವಸ್ಥೆಗಳ ಕಡೆ ಸೂಕ್ತ ಗಮನ ಹರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಘಟನೆಗೆ ಕಾರಣವಾಯಿತು. ಹಾಗಾಗಿ, ಮುಂಬರುವ ದಿನಗಳಲ್ಲಿ ಇಂಥದ್ದು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.
ಇದಲ್ಲದೆ, ತಾವು ಕೈಗೊಂಡಿರುವ ಶಿಸ್ತುಕ್ರಮದ ಅನುಗುಣವಾಗಿ ವಿಸ್ಟ್ರಾನ್ನ ಭಾರತ ವಿಭಾಗದ ಉಪಾಧ್ಯಕ್ಷರಾದ ವಿನ್ಸೆಂಟ್ ಲೀ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ವಿಸ್ಟ್ರಾನ್ ಇನ್ಫೋಕಾಮ್ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಉಪಾಧ್ಯಕ್ಷ ವಿನ್ಸೆಂಟ್ ಲೀ ಅವರನ್ನ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದೆ.
ಜೊತೆಗೆ, ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಲು ಒಂದು 24X7 ಬಹುಭಾಷಾ ಹೆಲ್ಪಲೈನ್ನ ಸಹ ಸ್ಥಾಪಿಸಿದೆ ಎಂದು ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ನೌಕರರು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತಮ್ಮ ಹೆಸರು ಹೇಳದೆಯೇ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ.