ರಸ್ತೆ ಮೇಲೆ ಹೊಸ ವರ್ಷದ ಶುಭಾಶಯ ಬರೆಯುತ್ತಿದ್ದಾಗಲೇ ಕಾರು ಢಿಕ್ಕಿ: 2 ಯುವಕರು ಸ್ಥಳದಲ್ಲೇ ಸಾವು | Janata news
ಉಡುಪಿ : ಹೊಸ ವರ್ಷಕ್ಕೆ ಶುಭ ಕೋರಿ ರಸ್ತೆಯಲ್ಲಿ ಬರೆಯುತ್ತಿರುವ ವೇಳೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮೀಯಾರು ಕಾಜರಬೈಲು ಬಳಿ ನಡೆದಿದೆ.
ಕಾರ್ಕಳದ ಮಿಯಾರು ಕಾಜರಬೈಲು ಸಮೀಪ ನಿನ್ನೆ ತಡರಾತ್ರಿ ನಡೆದ ಘಟನೆಯಲ್ಲಿ ಬಾಗಲಕೋಟೆ ಮೂಲದ ಶರಣ್ (26) ಹಾಗೂ ಸಿದ್ದು (25) ಎನ್ನುವವರು ಮೃತಪಟ್ಟಿದ್ದಾರೆ. ತೌಸೀಫ್ ಹಾಗೂ ಬಸವರಾಜ್ ಎನ್ನುವ ಇನ್ನಿಬ್ಬರಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರು ಜೆಸಿಬಿ, ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಹೊಸ ವರ್ಷದ ಹಿನ್ನೆಲೆ ಈ ನಾಲ್ವರು ರಸ್ತೆ ಮೇಲೆ ಹೊಸ ವರ್ಷದ ಶುಭಾಶಯ ಬರೆಯುವುದಕ್ಕಾಗಿ ಸೇರಿದ್ದರು. ಈ ವೇಳೆ ವೇಗವಾಗಿ ಬಂದ ಮಾರುತಿ ಇಕೋ ಕಾರು ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.
ಘಟನೆ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.