ರಾಧಿಕಾ ಕುಮಾರಸ್ವಾಮಿ ಯಾರು ಅಂತಾ ಗೊತ್ತಿಲ್ಲ: ಎಚ್.ಡಿ ಕುಮಾರಸ್ವಾಮಿ | Janata news
ಮಂಡ್ಯ : ರಾಧಿಕಾ ಕುಮಾರಸ್ವಾಮಿ ಯಾರು ಅಂತ ತನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.
ಭಾನುವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನೇರಳಕೆರೆ ಹಾಗೂ ಮಹದೇವಪುರ ಗ್ರಾಮದಲ್ಲಿ 50 ಕೋಟಿ ರೂ. ವೆಚ್ಚದ ಬಹು ಗ್ರಾಮಗಳ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಯಾರಪ್ಪ ಅದ್ಯಾರು ನಂಗೆ ಗೊತ್ತಿಲ್ಲ ಎಂದಿದ್ದಾರೆ.
ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಕೊಟ್ಟಿದ್ದಾರೆ. ಅದರ ಬಗ್ಗೆ ಏನ್ ಹೇಳ್ತೀರಿ ಎಂದು ಮಾಧ್ಯಮದವರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರವಾಗಿ ಕುಮಾರಸ್ವಾಮಿ ಅವರು, ಅವರ್ಯಾರು ಎಂದೇ ನನಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಗೊತ್ತಿಲ್ಲದ ಕುಟುಂಬದವರ ಬಗ್ಗೆ ನನಗೆ ಕೇಳಬೇಡಿ ಎಂಬುದಾಗಿ ಪ್ರತಿಕ್ರಿಯಿಸಿ, ಏನೊಂದು ವಿಷಯ ತಿಳಿಸಲು ನಿರಾಕರಿಸಿದರು.
ಅದೇ ವೇಳೆ ರಾಜಕೀಯದ ಈಗಿನ ಸ್ಥಿತಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಸದ್ಯದ ರಾಜಕೀಯ ಪರಿಸ್ಥಿತಿ, ಹಾಗೂ ರಾಜ್ಯ ಸರ್ಕಾರದ ಬಗ್ಗೆ ನಾನೇನೂ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ನನ್ನ ಉದ್ದೇಶ ಇರೋದು ಎರಡೂವರೆ ವರ್ಷ ಸರ್ಕಾರದ ಅವಧಿ ಮುಕ್ತಾಯಗೊಂಡ ನಂತ್ರ, ರಾಜ್ಯದಲ್ಲಿ ಜನತಾದಳ ಸರ್ಕಾರ ಅಸ್ಥಿತ್ವಕ್ಕೆ ತರೋದು. 2023 ಕರ್ನಾಟಕದ ರಾಜ್ಯ ಜನತಾದಳದ ರಾಜ್ಯ. ಜನತಾ ರಾಜ್ಯ. ಅದನ್ನು ತರೋದಕ್ಕೆ ಏನ್ ಬೇಕೋ ಅದರ ಬಗ್ಗೆ ಚಿಂತೆ ಮಾಡುತ್ತೇನೆ ಎಂದರು.