ದೇಗುಲಕ್ಕೆ ಬಂದು ₹101 ತಪ್ಪು ಕಾಣಿಕೆ ಸಲ್ಲಿಸಿದ ಮಾಜಿ ಸಿಎಂ ಕುಮಾರಸ್ವಾಮಿ! | Janata news
ರಾಮನಗರ : ರಾಮನಗರ ತಾಲ್ಲೂಕಿನ ಜಾಲಮಂಗಲದ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲದಲ್ಲಿ ಶುಕ್ರವಾರ ಕುಟುಂಬದೊಂದಿಗೆ ಪೂಜೆ ಸಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ, ದೇವರಿಗೆ ₹ 101 ತಪ್ಪು ಕಾಣಿಕೆಯನ್ನೂ ಅರ್ಪಿಸಿದರು.
ಶುಕ್ರವಾರ ಕುಟುಂಬ ಸಮೇತ ದೇಗುಲಕ್ಕೆ ಬಂದ ಎಚ್ಡಿಕೆ, 101 ರೂಪಾಯಿಯನ್ನು ತಪ್ಪು ಕಾಣಿಕೆಯಾಗಿ ದೇವರಿಗೆ ಸಮರ್ಪಿಸಿದರು. ಬಳಿಕ ಲಕ್ಷ್ಮೀನಾರಾಯಣಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಕುಮಾರಸ್ವಾಮಿ 2004ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ, ಲಕ್ಷ್ಮಿ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವ ಸಂದರ್ಭ ಇಲ್ಲಿನ ಜನ ನನ್ನನ್ನು ಮುಂದಿನ ಮುಖ್ಯಮಂತ್ರಿ ಎಂದು ಕೂಗಿದ್ದರು. ಈ ಕ್ಷೇತ್ರದ ಪ್ರತಿಯೊಬ್ಬರೂ ಸಂತೋಷದಿಂದ ಬದುಕುವಂತೆ ಮಾಡಬೇಕು. ಅಲ್ಲಿಯವರೆಗೂ ಮಂತ್ರಿ ಸ್ಥಾನಕ್ಕೆ ಆಸೆ ಪಡಲ್ಲ ಎಂದು ಅವರೆದುರು ಭಾಷಣ ಮಾಡಿದ್ದೆ.
ಆದರೆ ನಂತರದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆದರೂ ಅರ್ಧಕ್ಕೆ ಅಧಿಕಾರ ಮೊಟಕಾಯಿತು. ಅಂದಿನಿಂದಲೂ ದೇವರ ಸನ್ನಿಧಿಯಲ್ಲಿ ಆಡಿದ ಮಾತು ತಪ್ಪಿ, ಅಪಚಾರ ಎಸಗಿದ್ದಿನೇನೊ ಎಂದು ಮನಸ್ಸಿನಲ್ಲಿ ಕೊರಗಿದೆ. ಹೀಗಾಗಿ ಕುಟುಂಬ ಸಮೇತ ಬಂದು ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಕೇಳಿದ್ದೇನೆ. 2023ರ ಚುನಾವಣೆಗೆ ಆಶೀರ್ವಾದ ಕೋರಿದ್ದೇನೆ ಎಂದರು.
ಕುಮಾರಸ್ವಾಮಿ ಜತೆಗೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಅವರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಾಗಡಿ ಶಾಸಕ ಮಂಜುನಾಥ್ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.