ಕೊಲೆ ಮಾಡಿ ಕಲ್ಲು, ಹಗ್ಗದಿಂದ ಕಟ್ಟಿ ಬಾವಿಗೆ ಎಸೆದ ಹಂತಕರು! | Janata news
ಹಾಸನ : ಹೊಳೆನರಸೀಪುರ ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದ ಬಾವಿಯಲ್ಲಿ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಅದೇ ಗ್ರಾಮದ ಎಂ.ಎನ್. ಮೂರ್ತಿ (50) ಅವರ ಶವ ಎಂದು ಗುರುತಿಸಲಾಗಿದೆ.
ಮಾರಗೊಂಡನಹಳ್ಳಿ ಗ್ರಾಮದ ನಿಂಗಪ್ಪ ಎಂಬುವರ ಪುತ್ರ ಎಂ.ಎನ್. ಮೂರ್ತಿ(50) ಕೊಲೆಯಾದ ದುರ್ದೈವಿ. ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮೂರ್ತಿ, ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಊರಿಗೆ ಬಂದಿದ್ದರು.
ಭಾನುವಾರ ಮಧ್ಯಾಹ್ನ ಊಟ ಮಾಡಿ ಮನೆಯಿಂದ ಹೊರಹೋದ ಮೂರ್ತಿ ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದರೂ ಸುಳಿವು ಸಿಕ್ಕಿರಲಿಲ್ಲ. ಗ್ರಾಮದ ಕೆರೆಯಲ್ಲಿರುವ ಬಾವಿಯಲ್ಲಿ ಮನುಷ್ಯನ ಕಾಲು ಕಾಣಿಸುತ್ತಿತ್ತು, ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿದರು. ಆಗ ಮೂರ್ತಿ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಕುತ್ತಿಗೆ, ಕಾಲು ಮತ್ತು ಸೊಂಟಕ್ಕೆ ಹಗ್ಗ ಬಿಗಿದು, ಕಲ್ಲು ಕಟ್ಟಿ ಬಾವಿಯಲ್ಲಿ ಹಾಕಿದ್ದಾರೆ. ಇದು ಕೊಲೆ ಎಂದು ಮೃತರ ಸಹೋದರ ಎಂ.ಎನ್. ನೀಲಕಂಠ ದೂರು ದಾಖಲಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ಎ. ರಾಘವೇಂದ್ರ ಅವರೊಂದಿಗೆ ಮೂರ್ತಿಯ ಸಹೋದರ ಗುರುತಿಸಿಕೊಂಡು ಪ್ರಚಾರ ಮಾಡಿದ್ದರು. ಗೆದ್ದ ನಂತರ ರಾಘವೇಂದ್ರ ಪಟಾಕಿ ಹೊಡೆಯುವ ಸಂದರ್ಭದಲ್ಲಿ ಜೆಡಿಎಸ್ ಬೆಂಬಲಿಗರ ನಡುವೆ ಗಲಾಟೆ ನಡೆದು, ಎರಡೂ ಪಕ್ಷದವರೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ.