ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್ನಂತೆ ಇದ್ದೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ | Janata news
ಬಾಗಲಕೋಟೆ : ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್ನಂತೆ ಇದ್ದೆ ಎಂದಿದ್ದಾರೆ.
ಜಿಲ್ಲೆಯ ನವನಗರದ ಕಾಳಿದಾಸ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಂಘಟನಾ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿದ್ದರು.
ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸುವ ಸಲುವಾಗಿ ಕೋವಿಡ್ ಬಳಿಕ ಬಾಗಲಕೋಟೆಯಲ್ಲಿ ಮೊದಲ ಬಾರಿಗೆ ಜೆಡಿಎಸ್ ಸಂಘಟನಾ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್ನಂತೆ ಇದ್ದೆ. ಮೈತ್ರಿ ಸರ್ಕಾರದಲ್ಲಿ ನನಗೆ ಪೂರ್ಣ ಸ್ವಾತಂತ್ರ್ಯವಿರಲಿಲ್ಲ. ನಾನು ನಿರ್ಧಾರ ತೆಗೆದುಕೊಳ್ಳಲು ಆಗಿರಲಿಲ್ಲ ಎಂದು ಹೇಳಿದರು.
ಒಂದು ಕಡೆ ಸಿದ್ದರಾಮಯ್ಯ ಒತ್ತಡ ಇತ್ತು. ಇನ್ನೊಂದು ನೀರಾವರಿ ಹಳೆ ಯೋಜನೆ ಮುಂದುವರಿಸಬೇಕಿತ್ತು. ಹಾಗೆ ಮತ್ತೊಂದು ಕಡೆ ರೈತರ ಸಾಲಮನ್ನಾ ಬಗ್ಗೆ ಬಿಜೆಪಿಯವರು ಒತ್ತಡ ಹೇರುತ್ತಿದ್ದರು. ಸಾಲಮನ್ನಾ ಮಾಡದೆ ಟೋಪಿ ಹಾಕುತ್ತಿದ್ದೀರಿ ಎಂದು ಬಿಜೆಪಿಯವರು ಹೇಳುತ್ತಿದ್ದರು ಎಂದು ಹೆಚ್ಡಿಕೆ ತಿಳಿಸಿದರು.
ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಬಿಜೆಪಿಯವರು ಹೇಳುತ್ತಾರೆ. ಮೋದಿ ಒಂದು ಇಂಜಿನ್ ಆದರೆ ಯಡಿಯೂರಪ್ಪ ಇನ್ನೊಂದು ಇಂಜಿನ್ ಅಂತೆ. ಆದರೆ ಡಬಲ್ ಇಂಜಿನ್ ಇಟ್ಟುಕೊಂಡು ಏಕೆ ಕೆಲಸ ಆಗುತ್ತಿಲ್ಲ. ಇಂಜಿನ್ಗಳ ಬೋಗಿಗಳು ಏಕೆ ಎಲ್ಲೆಲ್ಲೋ ಹೋಗಿಬಿಟ್ಟಿವೆ. ಬರಿ ಇಂಜಿನ್ ಮಾತ್ರ ಇವೆ ಬೋಗಿಗಳಿಲ್ಲ. ಬರಿ ಇಂಜಿನ್ ಇಟ್ಟುಕೊಂಡು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಡಬಲ್ ಇಂಜಿನ್ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
ಈ ದೇಶದ ವ್ಯವಸ್ಥೆಯಲ್ಲಿ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವುದು ವ್ಯರ್ಥ. ನನ್ನ 12 ವರ್ಷದ ರಾಜಕೀಯ ಅನುಭವ ಇದು. ಇದರಿಂದ ಕೆಲವರಿಗೆ ಸಹಾಯ ಆಗಿರಬಹುದು. ಅದೇನೋ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿರುವಂತೆ ಸಿಡಿಯನ್ನು ಕೆಲವರು ಬಳಕೆ ಮಾಡುಕೊಂಡಿರಬಹುದು. ಆದರೆ ನಾನು ಆ ಸಿಡಿಯ ಪಾಲುದಾರ ಅಲ್ಲ. ಶ್ರಮಪಟ್ಟು ಯಾವುದೋ ರೀತಿಯಿಂದ ಕಷ್ಟಪಟ್ಟು ಸರ್ಕಾರ ಮಾಡಿದ್ದೀರಿ. ಖಾತೆ ಕ್ಯಾತೆ ಬಿಟ್ಟು ಜನರ ಸಮಸ್ಯೆಗಳ ಕಡೆ ಗಮನ ಕೊಡಿ ಎಂದರು.
ಸಮಾವೇಶದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶಂಪೂರ್,ಮಾಜಿ ಶಾಸಕ ಕೋಣರೆಡ್ಡಿ, ಬಾಗಲಕೋಟೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹನಮಂತ ಮಾವಿನಮರ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು, ಜಿಲ್ಲೆಯ ವಿವಿಧ ತಾಲೂಕುಗಳ ಕಾರ್ಯಕರ್ತರು ಭಾಗಿಯಾಗಿದ್ದಾರೆ.