ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಶಿಕ್ಷಕ ಅರೆಸ್ಟ್ | Janata news
ಮಂಡ್ಯ: : ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಎಂಬ ಕಾರಣಕ್ಕೆ ಹರಿಹರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ.ಟಿ.ಕೃಷ್ಣೇಗೌಡ ಎಂಬ ಶಿಕ್ಷಕನನ್ನು ಜಿಲ್ಲೆಯ ಕೆ.ಆರ್.ಪೇಟೆ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಈತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದರ ಜೊತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಫೇಲ್ ಮಾಡುತ್ತೇನೆ ಎಂದು ಸಹ ಹೆದರಿಸುತ್ತಿದ್ದ. ಕೊನೆಗೆ ಈತನ ಕಿರುಕುಳ ತಾಳಲಾರದೆ ವಿದ್ಯಾರ್ಥಿಯನಿಬ್ಬರು ತಮ್ಮ ಪೋಷಕರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಾರೆ. ಆದರೆ ಪೋಷಕರು ಮರ್ಯಾದೆಗೆ ಅಂಜಿ ಶಿಕ್ಷಕ ಕೃಷ್ಣೇಗೌಡನನ್ನು ಗದರಿಸಿ ದೂರು ನೀಡದೆ ಸುಮ್ಮನಾಗಿದ್ದಾರೆ.
ಆದರೆ ಶಿಕ್ಷಕನ ವರ್ತನೆ ಮುಂದುವರೆದ ಕಾರಣ ಬಿಇಒ ಅವರಿಗೆ ಗ್ರಾಮಸ್ಥರು ದೂರು ನೀಡಿದರು, ಬಿಇಒ ಬಸವರಾಜು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿನಿಯರು ಖಚಿತಪಡಿಸಿದ ಬಳಿಕ ಶಿಕ್ಷಕನ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.
ಬಿಇಒ ದೂರು ಆಧರಿಸಿ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಶಿಕ್ಷಕ ಬಿ.ಟಿ.ಕೃಷ್ಣೇಗೌಡನನ್ನು ಬಂಧಿಸಿದ್ದಾರೆ.