ಸ್ವಯಂ ನಿವೃತ್ತಿ ಪಡೆದು ಮನೆಗೆ ಬಂದಿದ್ದ ಯೋಧ, ಹೃದಯಾಘಾತದಿಂದ ಸಾವು, ಮುಗಿಲು ಮುಟ್ಟಿದ ಆಕ್ರಂದನ | Janata news
ಕೋಲಾರ : ಸೇನೆಯಿಂದ ನಿವೃತ್ತಿ ಹೊಂದಿದ ಒಂದು ದಿನ ಕಳೆಯುವಷ್ಟರಲ್ಲಿ, ಹೃದಯಾಘಾತದಿಂದ ಯೋಧ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ, ಕೋಲಾರದ ಅಂಬೇಡ್ಕರ್ ಬಡಾವಣೆಯಲ್ಲಿ ನಡೆದಿದೆ.
ಕೋಲಾರದ ಅಂಬೇಡ್ಕರ್ ಬಡಾವಣೆಯ ಮಂಜುನಾಥ್, ಜನವರಿ 31, 2021ರಂದು 17 ವರ್ಷಗಳ ಸುದೀರ್ಘ ಸೇನೆಯ ಸೇವೆಯ ಬಳಿಕ, ಸ್ವಯಂ ನಿವೃತ್ತಿಯನ್ನು ಪಡೆದು ಊರಿಗೆ ಆಗಮಿಸಿದ್ದರು.
ಫೆಬ್ರವರಿ 1 ರಂದು ಎದೆ ನೋವು ಕಾಣಿಸಿಕೊಂಡಿತ್ತು. ಪರಿಣಾಮ ಪತ್ನಿ ಅಶ್ವಿನಿ ಹಾಗೂ ಕುಟುಂಬಸ್ಥರು ಕೋಲಾರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 2 ರಂದು ಸಾವನ್ನಪ್ಪಿದ್ದಾರೆ.
42 ವರ್ಷದ ಮಂಜುನಾಥ್ ಸಾವನ್ನಪ್ಪಿದ ಯೋಧರಾಗಿದ್ದು, ಹೈದರಾಬಾದ್ ನಲ್ಲಿ 17 ವರ್ಷ ಸುದೀರ್ಘ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಫೆಬ್ರವರಿ 3 ರಂದು ಅಂದರೆ ನಿನ್ನೆ ಹುಟ್ಟೂರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆಯ ಕೋಡಗುರ್ಕಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.