ಸಚಿವ ಶ್ರೀರಾಮುಲು ಸಮ್ಮುಖದಲ್ಲೇ ವಿಷ ಸೇವಿಸಿ ಸ್ವಾಮೀಜಿ ಆತ್ಮಹತ್ಯೆಗೆ ಯತ್ನ! | Janata news
ಚಿತ್ರದುರ್ಗ : ಸಚಿವ ಬಿ. ಶ್ರೀರಾಮುಲು ಮುಂದೆಯೇ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಕುಣಿಗಲ್, ಚಿತ್ರದುರ್ಗ ಯೋಗವನ ಬೆಟ್ಟದ ಪೀಠಾಧ್ಯಕ್ಷ ಸ್ಥಾನ ತಪ್ಪಿದ ಹಿನ್ನೆಲೆ ಬೇಸರಗೊಂಡ ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರಸ್ವಾಮಿ, ಸಚಿವ ಶ್ರೀರಾಮಲು ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಚಿತ್ರದುರ್ಗದ ಬಿಜೆಪಿ ಕಚೇರಿ ಬಳಿ ನಡೆದಿದೆ.
ಯೋಗವನ ಬೆಟ್ಟದ ಸಿದ್ಧಲಿಂಗ ಶ್ರೀಗಳ ಲಿಂಗೈಕ್ಯ ಬಳಿಕ ಬಸವ ಕುಮಾರ ಸ್ವಾಮಿಜಿ ಅಧ್ಯಕ್ಷರಾಗಿದ್ದರು. ಇದೇ ಕಾರಣಕ್ಕೆ ತಿಪ್ಪೇರುದ್ರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಸಚಿವರಿಗೆ ತಿಳಿಸಲು ನಗರದ ಬಿಜೆಪಿ ಕಚೇರಿ ಬಳಿ ಸ್ವಾಮೀಜಿ ಆಗಮಿಸಿದ್ದರು.
ಸಚಿವರನ್ನು ಭೇಟಿಯಾದ ಸ್ವಾಮೀಜಿ, ಯೋಗವನ ಬೆಟ್ಟದ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ನನಗೆ ಮೋಸ ಮಾಡಿದ್ದಾರೆಂದು ಸಚಿವರಿಗೆ ಮನವಿ ಸಲ್ಲಿಸಿ, ಕ್ಷಣ ಮಾತ್ರಕ್ಕೆ ಬ್ಯಾಗ್ನಲ್ಲಿ ತಂದಿದ್ದ ವಿಷದ ಬಾಟಲಿ ತೆಗೆದು ಸಚಿವರ ಎದುರೇ ಸೇವಿಸಿದರು. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಸ್ವಾಮೀಜಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.