ಪ್ರೇಯಸಿಯ ಶೀಲ ಶಂಕಿಸಿ, ಕತ್ತು ಹಿಸುಕಿ ಕೊಲೆಗೈದ ಪ್ರೇಮಿ: ಪೊಲೀಸರಿಂದ ಸ್ಫೋಟಕ ರಹಸ್ಯ ಬಯಲು | Janata news
ಬಾಗಲಕೋಟೆ : ಪ್ರೇಯಸಿಯ ಶೀಲ ಶಂಕಿಸಿ, ಕತ್ತು ಹಿಸುಕಿ ಕೊಲೆಗೈದು, ಘಟಪ್ರಭಾ ನದಿಗೆ ಎಸೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಯುವತಿ ಜ್ಯೋತಿ ಭಾಗವ್ವಗೋಳ(22) ಮೃತೆ. ನರ್ಸಿಂಗ್ ಓದುತ್ತಿದ್ದ ಈಕೆ ಬಾಗಲಕೋಟೆಯ ವಿನಾಯಕ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದಳು.
ಓದುತ್ತಲೇ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಫೆ.13ರಂದು ಕೆಲಸಕ್ಕೆಂದು ಹೋದವಳು ಮನೆಗೆ ವಾಪಸ್ ಬಂದಿರಲಿಲ್ಲ. ಕಂಗಾಲಾದ ಕುಟುಂಬಸ್ಥರು ಯುವತಿ ಬಾಗಲಕೋಟೆ ನಗರ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು.
ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ಯುವತಿಯ ಶವ ಪತ್ತೆಯಾಗಿತ್ತು.
ಕಲಾದಗಿ ಗ್ರಾಮದ ಹನೀಫ್ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲ್ಸ ಮಾಡುತ್ತಿದ್ದ. ಆಸ್ಪತ್ರೆಯಲ್ಲಿ ಕೆಲ್ಸ ಮಾಡುತ್ತಿದ್ದ ಜ್ಯೋತಿಯೊಂದಿಗೆ ಹನೀಫ್ ಎನ್ನುವವನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಪ್ರೀತಿ ವಿಚಾರ ಮೊದಲೇ ಗೊತ್ತಿದ್ದ ಯುವತಿ ಜ್ಯೋತಿ ಕುಟುಂಬಸ್ಥರು, ಜಾತಿ ಬೇರೆ ಎಂದು ಹನೀಫ್ಗೆ ಬುದ್ಧಿವಾದ ಹೇಳಿದ್ದರು.
ಆದರೆ ಇತ್ತೀಚೆಗೆ ಜ್ಯೋತಿ ಶೀಲದ ಬಗ್ಗೆ ಅನುಮಾನಗೊಂಡಿದ್ದ ಹನೀಫ್ ಫೆಬ್ರವರಿ 13 ರಂದು ಜ್ಯೋತಿಯನ್ನು ಪುಸಲಾಯಿಸಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಈ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿದ್ದು ಜ್ಯೋತಿಯನ್ನು ಕೊಲೆಗೈದು ಸಾಕ್ಷಿ ನಾಶಮಾಡಲು ಶವವನ್ನ ಘಟಪ್ರಭಾ ನದಿಗೆ ಎಸೆದು ಹೋಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪೊಲೀಸರು ಆರೋಪಿ ಹನೀಫ್ನನ್ನು ಬಂಧಿಸಿದ್ದಾರೆ. ಯುವತಿಯ ಕೊಲೆ ಮಾಡಿರುವುದಾಗಿ ಆರೋಪಿ ಹನೀಫ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಮೃತಳ ಕುಟುಂಬಸ್ಥರು ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ್ದಾರೆ.