ಚಿತ್ರದುರ್ಗದಲ್ಲಿ ಅಬ್ಬರಿಸಿದ ಅಕಾಲಿಕ ಮಳೆ, ರಸ್ತೆಗಳ ಮೇಲೆ ನೀರೋ, ನೀರು! | Janata news
ಚಿತ್ರದುರ್ಗ : ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ, ತಾಲೂಕುಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಕಳೆದ 4 ಗಂಟೆ ಗಳಿಂದಲೂ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಅಕಾಲಿಕ ಮಳೆ ಚಿತ್ರದುರ್ಗದಲ್ಲಿ ದಾಖಲೆ ನಿರ್ಮಿಸಿದೆ. ನಗರದಲ್ಲಿ 96.8 ಮಿ. ದಾಖಲೆಯ ಮಳೆಯಾಗಿದ್ದರೆ, ಗ್ರಾಮಾಂತರ ಭಾಗದಲ್ಲಿ 56.8 ಮಿಲಿಮೀಟರ್ ಮಳೆಯಾಗಿದೆ.
ಮೆದೇಹಳ್ಳಿ, ತುರುವನೂರು ರಸ್ತೆ, ಗುಮಾಸ್ತ ಕಾಲನಿ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ರಸ್ತೆಗಳ ನೀರು ರಭಸವಾಗಿ ಹರಿಯುತ್ತಿದೆ. ಮಲ್ಲಾಪುರ ಕೆರೆ ಕೋಡಿ ಬಿದ್ದಿದ್ದು, ಧುಮ್ಮಿಕ್ಕಿ ಹರಿಯುತ್ತಿರುವ ಕೆರೆಯ ನೀರು ಗ್ರಾಮದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಸುಮಾರು 70ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರವೂ ಸ್ಥಗಿತಗೊಂಡಿದೆ. ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ ತಾಲೂಕುಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ
ಈ ಕುರಿತಂತೆ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಪತ್ರ ಬರೆದಿರುವಂತ ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್ ಸದಸ್ಯ ಜಿ.ರಘು ಅಚಾರ್ ಅವರು, ಚಿತ್ರದುರ್ಗ ಪಟ್ಟಣದಲ್ಲಿ ಗುರುವಾರ ಬಿದ್ದ ಭಾರೀ ಮಳೆಯಿಂದಾಗಿ ಪಟ್ಟಣದ ಬಡಾವಣೆಗಳಲ್ಲಿ ಚರಂಡಿ, ಗೋಡೆಗಳು ಕುಸಿದು ನೀರು ಮನೆಯಗಳಿಗೆ ನುಗ್ಗಿ ಜನ ಜೀವನ ದುಸ್ಥರಗೊಂಡಿದೆ. ಅಲ್ಲದೇ ಮಲ್ಲಪುರಕೆರೆ ಹಾಗೂ ಸಜ್ಜನಕೆರೆ ಕೋಡಿ ಬಿಜ್ಜು ಹಲವು ಮನೆಗಳು ಕುಸಿದು ಬಿದ್ದು, ಒಟ್ಟಾರೆ ತುರ್ತು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 10 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.