ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ, ಆರು ಮಂದಿ ಬಲಿ.. | Janata news
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಮಂಡಿಕಲ್ ಹೋಬಳಿಯ ಹಿರೇನಾಗವಲ್ಲಿ ಗ್ರಾಮದಲ್ಲಿ ಸಂಭವಿಸಿರುವ ಜಿಲೆಟಿನ್ ಸ್ಫೋಟದಿಂದಾಗಿ ಆರು ಮಂದಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಹತ್ತಾರು ಕಿ.ಮೀ ವರೆಗೂ ಭೂಮಿ ಕಂಪಿಸಿದೆ.
ಸ್ಪೋಟದ ತೀವ್ರತೆಗೆ ಮೃತದೇಹಗಳೆಲ್ಲ ಛಿದ್ರ ಛಿದ್ರವಾಗಿ ನೂರಾರು ಮೀಟರ್ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಮೃತರನ್ನು ಉಮಾಕಾಂತ್ (ಇಂಜಿನಿಯರ್), ರಾಮು (ಸ್ಥಳೀಯ ನಿವಾಸಿ). ಮಹೇಶ್ (ವಾಚ್ ಮೆನ್) ಗಂಗಾಧರ್ ಮತ್ತು ಮುರುಳಿ (ಕಂಪ್ಯೂಟರ್ ಅಪರೇಟರ್) ಎಂದು ಗುರುತಿಸಲಾಗಿದೆ. ಟಾಟಾ ಏಸ್ ಚಾಲಕ ರಿಯಾಜ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಮರವಾಸಿನಿ ಕ್ರಷರ್ ಮಾಲೀಕ ಹಾಗೂ ಸ್ಥಳೀಯ ಬಿಜೆಪಿ ಮುಖಂಡರೂ ಆಗಿರುವ ನಾಗರಾಜು, ಆಂಧ್ರ ಪ್ರದೇಶ ಮೂಲದ ಶಿವಾರೆಡ್ಡಿ ಹಾಗೂ ರಾಘವೇಂದ್ರ ರೆಡ್ಡಿ ಎಂದು ತಿಳಿದು ಬಂದಿದೆ.
ರಾತ್ರಿ 12.45ರ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಭ್ರಮರವರ್ಷಿಣಿ ಕ್ವಾರಿ ಬ್ಲಾಸ್ಟಿಂಗ್ಗೆ ಅಕ್ರಮವಾಗಿ ಸ್ಫೋಟಕ ಸಂಗ್ರಹ ಮಾಡಲಾಗಿತ್ತು. ಪೊಲೀಸರು ದಾಳಿ ನಡೆಸಿದ್ದ ಹಿನ್ನೆಲೆ ಸ್ಫೋಟಕವನ್ನು ಅರಣ್ಯದಲ್ಲಿ ಬಚ್ಚಿಡಲಾಗಿತ್ತು.
ಭ್ರಮರವಾಸಿನಿ ಕ್ರಷನ್ ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಇರುವ ಅರಣ್ಯದಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಮತ್ತು ಎಲೆಕ್ಟ್ರಿಕ್ ಡಿಟೋನೇಟರ್ಸ್ ಅನ್ನು ಹೊತ್ತು ತರಲು ಒಬ್ಬರು ಬೈಕ್ ನಲ್ಲಿ ಮುಂದೆ ಸಾಗಿದರೆ ನಾಲ್ವರು ಟಾಟಾ ಏಸ್ ನಲ್ಲಿ ತೆರಳಿದ್ದರು. ಬಚ್ಚಿಟ್ಟಿದ್ದ ಸ್ಫೋಟಕ ಸಾಗಿಸಲು ತೆರಳಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ.