ಯಲ್ಲಮ್ಮನ ಜಾತ್ರೆ: ದೇವರ ಹೆಸರಲ್ಲಿ ನಡುರಸ್ತೆಯಲ್ಲಿ ಮಹಿಳೆಯರಿಂದ ಅರೆ ಬೆತ್ತಲೆ ಮೆರವಣಿಗೆ | Janata news
ಯಾದಗಿರಿ : ಯಲ್ಲಮ್ಮನ ಜಾತ್ರೆ ನಿಮಿತ್ತ ಅನೇಕ ಮಹಿಳೆಯರು ದೇಹಕ್ಕೆ ಬೇವಿನ ಸೊಪ್ಪು ಕಟ್ಟಿಕೊಂಡು, ಅರೆ ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಸುರಪುರ ನಗರದಲ್ಲಿ ನಡೆದಿದೆ.
ಮಂಗಳವಾರ ಬೆತ್ತಲೆ ಮಹಿಳೆಗೆ ಸೊಪ್ಪುಕಟ್ಟಿ ನಡುಬೀದಿಯಲ್ಲಿ ಮೆರವಣಿಗೆ ಮಾಡಲಾಗಿದೆ. ದೇವರ ಹೆಸರಲ್ಲಿ ಬೆತ್ತಲೆ ಸೇವೆ ಆಚರಣೆಗೆ ಯಾದಗಿರಿ ಜಿಲ್ಲೆಯಲ್ಲಿ ಬಹುತೇಕ ಕಡೆ ಚಾಲ್ತಿಯಲ್ಲಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಮಂಗಳವಾರ ಹಿನ್ನೆಲೆ ಕೆಲ ಸಮುದಾಯಗಳು ದೇವರಿಗೆ ಹರಕೆ ತೀರಿಸುವ ನೆಪದಲ್ಲಿ ಹೆಣ್ಣುಮಕ್ಕಳ ಅರೇ ಬೆತ್ತಲೆ ಮಾಡಿ ದೇಹಕ್ಕೆ ಬೇವಿನ ಸೊಪ್ಪನ್ನು ಕಟ್ಟಿ ಉರಿ ಬಿಸಿಲಿನಲ್ಲಿ ರಸ್ತೆಯಲ್ಲಿ ಮೆರವಣಿಗೆ ಸಹ ಮಾಡಿದ್ದಾರೆ. ಇಷ್ಟೇ ಅಲ್ಲದೇ ಸಾರ್ವಜನಿಕವಾಗಿ ಪ್ರಾಣಿಬಲಿ ಸಹ ನಡೆಸಲಾಗಿದೆ.
ಜಿಲ್ಲೆಯ ಖಾನಾಪುರ, ಗುಂಡಗುರ್ತಿ, ಬಿಜಾಸಪುರ ಸೇರಿದಂತೆ ಬಹುತೇಕ ಕಡೆ ಇದೆ ರೀತಿಯ ಆಚರಣೆ ನಡೆದಿದೆ. ಸುರಪುರ ಪಟ್ಟಣದಲ್ಲಿಯೇ ಇಂತಹ ಅನಿಷ್ಠ ಪದ್ಧತಿಗಳು ರಾಜಾರೋಷವಾಗಿ ನಡೆಯುತ್ತಿದ್ದರೂ, ಜಿಲ್ಲಾಡಳಿತ ಮತ್ತು ತಾಲೂಕು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿ.
ದೇವರ ಹೆಸರಲ್ಲಿ ಹೆಣ್ಣಿಗೆ ಏಕೆ ಬೆತ್ತಲೆ ಸೇವೆಯ ಶಿಕ್ಷೆ ಕೊಡಲಾಗುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.