ತಮ್ಮನ ಆತ್ಮಹತ್ಯೆ ವಿಷಯ ತಿಳಿದು ಅಣ್ಣನೂ ಆತ್ಮಹತ್ಯೆಗೆ ಶರಣು! | Janata news
ಮೈಸೂರು : ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆಯಲ್ಲಿ ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಅಣ್ಣನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ನಡೆದಿದೆ.
ಎಲೆಗುಂಡಿ ಗ್ರಾಮದ ಸಹೋದರರಾದ ವೆಂಕಟೇಶ್ (28), ಹರೀಶ್ (25)ಮೃತ ಸೋದರರು.
ರೈತನಾಗಿದ್ದ ಹರೀಶ್ ಟ್ರ್ಯಾಕ್ಟರ್ ಚಾಲಕ ಸಹ ಆಗಿದ್ದನು. ಹರೀಶ್ ಟ್ರ್ಯಾಕ್ಟರ್ ವೇಗವಾಗಿ ಚಲಾಯಿಸುತ್ತಿದ್ದರಿಂದ ತಂದೆ ಚಿನ್ಮಯಿಗೌಡ ಬುದ್ಧಿ ಹೇಳಿದ್ದಾರೆ. ಹರೀಶ್ ತಮ್ಮನಿಗೆ ಕರೆ ಮಾಡಿ ನಿಧಾನವಾಗಿ ಟ್ರ್ಯಾಕ್ಟರ್ ಚಲಾಯಿಸುವಂತೆ ತಿಳಿ ಹೇಳಿದ್ದರು. ತಂದೆಯ ಮಾತುಗಳಿಂದ ಮನನೊಂದ ಹರೀಶ್ ಗುರುವಾರ ಬೆಳಗ್ಗೆ ಎಲೆಹುಂಡಿ ಸಮೀಪದ ಕೆರೆ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವಿಚಾರವನ್ನು ಮೈಸೂರಿಗೆ ಹೋಗಿದ್ದ ವೆಂಕಟೇಶ್ಗೆ ಸ್ನೇಹಿತರು ತಿಳಿಸಿದ್ದಾರೆ. ಈ ವೇಳೆ ಮೊಬೈಲ್ ಗೆ ತಮ್ಮನ ಸಾವಿನ ಫೋಟೋಗಳು ಬಂದಿವೆ. ಫೋಟೋ ನೋಡಿ ಮತ್ತಷ್ಟು ಆಘಾತಕ್ಕೊಳಾದ ವೆಂಕಟೇಶ್, ಮನೆಗೆ ಬರದೆ ತನ್ನ ಕಾರಿನಲ್ಲಿ ಸರಗೂರು ಕಡೆಗೆ ಹೋಗಿ ನಾಲೆಯ ಸಮೀಪ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.