ಪೋಸ್ಟ್ ಮಾರ್ಟಂ ಕೊಠಡಿಗೆ ಹೋಗಿ ಜೀವಂತವಾಗಿ ವಾಪಸ್ ಬಂದ ಯುವಕ! | Janata news
ಬಾಗಲಕೋಟೆ : ಪೋಸ್ಟ್ ಮಾರ್ಟಂ ಕೊಠಡಿಗೆ ಹೋಗಿ ಅದೃಷ್ಟವಶಾತ್ ಜೀವಂತವಾಗಿ ವಾಪಸ್ ಬಂದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಲಿಂಗಪುರದಲ್ಲಿ ನಡೆದಿದೆ.
ಮಹಾಲಿಂಗಪುರದ ನಿವಾಸಿ ಶಂಕರ್ ಗೊಂಬಿ (27) ಎಂಬ ಯುವಕನೇ ಮರಣೋತ್ತರ ಪರೀಕ್ಷೆ ನಡೆಸುವ ಕೋಣೆ ತಲುಪಿ ವಾಪಸ್ ಬಂದಿದ್ದಾನೆ.
ಫೆಬ್ರವರಿ 27 ರಂದು ಶಂಕರ್ ರಸ್ತೆ ದಾಟುವಾಗ ಬೈಕು ಮತ್ತು ಕಾರಿನ ನಡುವೆ ಅಪಘಾತವಾಗಿ ಶಂಕರ್ ತಲೆಗೆ ತೀರ್ವ ಪೆಟ್ಟು ಬಿದ್ದು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು.ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಆತ ಬದುಕುವ ಸಾಧ್ಯತೆ ಕಡಿಮೆ ಎಂದು ವೆಂಟಿಲೇಟರ್ ಅಳವಡಿಸಿ ಆತನನ್ನು ಅಂಬ್ಯುಲೆನ್ಸ್ ಮೂಲಕ ಅವನ ಮನೆಗೆ ಕಳುಹಿಸಿದ್ದರು.
ಇತ್ತ ಅಂಬ್ಯಲೆನ್ಸ್ ನಲ್ಲಿ ಅವನು ಸತ್ತಿದ್ದಾನೆಂದು ಸುದ್ದಿ ಹರಡಿ ಅವನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಅವನ ಸಾವನ್ನು ದೃಢಪಡಿಸಿದ ನಂತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು.
ಮರಣೋತ್ತರ ಪರೀಕ್ಷೆಯ ಕೋಣೆಯಲ್ಲಿ ಕೈ ಕಾಲು ಅಲುಗಾಡಲು ಶುರುಮಾಡಿವೆ. ವಿಷಯ ತಿಳಿದು ಹಿರಿಯ ವೈದ್ಯರು ಬಂದು ತಪಾಸಣೆ ಮಾಡಿದಾಗ, ಶಂಕರ್ ಬದುಕಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದರ ಮದ್ಯೆ ಸ್ನೇಹಿತರು ಹಾಗೂ ಅಭಿಮಾನಿಗಳು ಮರಳಿ ಬಾರದೂರಿಗೆ ಪಯಣ ಎಂಬ ಬರಹದೊಂದಿಗೆ ಶಂಕರನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.
ಸಾವಿನ ಮನೆಗೆ ಹೋಗಿ ಬದುಕಿ ಬಂದ ಗೆಳೆಯನನ್ನು ಕಂಡು ಸ್ನೇಹಿತರು ಅವನ ಕುಟುಂಬದವರು ಸಂತಸ ವ್ಯಕ್ತಪಡಿಸುತ್ತಾರೆ.