ನಿರಂತರ ಸಂಚಾರ ನಿಯಮ ಉಲ್ಲಂಘನೆ ಮಾಡುವವರನ್ನು ಪತ್ತೆಹಚ್ಚಲು ವಿಶೇಷ ಪೋಲೀಸರ ಕಾರ್ಯಾಚರಣೆ | Janata news
ಬೆಂಗಳೂರು : ಕೊರೋನಾ ಲಾಕ್-ಡೌನ್ ನಿಂದ ರಾಷ್ಟ್ರ ಸಂಪೂರ್ಣವಾಗಿ ಹೊರಬರಲು ಪ್ರಯತ್ನಿಸುತ್ತಿದ್ದಂತೆ ದಿನೇದಿನೇ ಅಪಘಾತಗಳು ಹೆಚ್ಚುತ್ತಿದ್ದು, ಅಪಘಾತ ತಡೆಗೆ, ನಿರಂತರ ಸಂಚಾರಿ ನಿಯಯ ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಇಂದು ಇಲ್ಲಿಯ ವಿಜಯನಗರ ಸಂಚಾರ ಪೊಲೀಸ್ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ನಿಂಗರಾಜು ರವರು 29 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ದ್ವಿಚಕ್ರ ವಾಹನ ವೊಂದರ ವಾಹನ ಸವಾರನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು ₹19,000 ದಂಡ ವಿಧಿಸಿರುತ್ತಾರೆ.
ನಿನ್ನೆ ನಡೆದ ಪ್ರತ್ಯೇಕ ಕಾರ್ಯಚರಣೆಯಲ್ಲಿ, ಸಂಚಾರ ಪೂರ್ವ ವಿಭಾಗದ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸತೀಶ್.ಎ.ರವರು ಕೈಗೊಂಡಿದ್ದ ವಿಶೇಷ ಕಾರ್ಯಾಚರಣೆ ವೇಳೆ ಸಂಚಾರ ಉಲ್ಲಂಘನೆ ಮಾಡುವ ಸವಾರರ ವಿರುದ್ಧ ಸುಮಾರು 261 ಕೇಸುಗಳನ್ನು ದಾಖಲಿಸಿ 1,30,500 ರೂಪಾಯಿ ದಂಡವನ್ನು ಕಟ್ಟಿಸಿರುತ್ತಾರೆ.
ನಿನ್ನೆ ನಗರ ಸಂಚಾರ ಪೂರ್ವ ವಿಭಾಗದ ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಗಂಗಾಧರ ರವರು ಸುಮಾರು 15 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ ದ್ವಿ-ಚಕ್ರ ವಾಹನದ ಮಾಲೀಕರಿಂದ ರೂ.7,500/ ದಂಡವನ್ನು ಕಟ್ಟಿಸಿಕೊಂಡಿದ್ದಾರೆ. ಅದಲ್ಲದೇ, ಸದರಿ ವಾಹನ ಮಾಲಿಕರಿಗೆ ಸಂಚಾರ ಅರಿವು ತರಬೇತಿಯನ್ನು ಪಡೆಯಲು ಕಳುಹಿಸಲಾಗಿದೆ, ಎಂದು ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಿದೆ.