ಸಿಡಿ ಬಹಿರಂಗ ವಿಚಾರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ | Janata news
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ವಿಚಾರದಲ್ಲಿ ನಾನೇನೂ ಮಾತನಾಡಲ್ಲ, ಬೇರೆ ವಿಚಾರದ ಪ್ರಶ್ನೆ ಇದ್ರೆ ಕೇಳಿ ಎಂದು ಮಾಧ್ಯಮದವರಿಗೆ ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಗೋಕಾಕ್ ಪ್ರತಿಭಟನೆಯಲ್ಲಿ ನನ್ನ ಹೆಸರು ಯಾಕೆ ಪ್ರಸಾಪ್ತ ಮಾಡಲಾಗಿದೆ ಎಂಬುವುದು ತಿಳಿಯುತ್ತಿಲ್ಲ. ಸಿಡಿ ವಿಚಾರದಲ್ಲಿ ನನ್ನ ಹೆಸರನ್ನು ಏಕೆ ಎಳೆದು ತರುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ರಾಜಕಾರಣಿಗಳನ್ನು ಜನರು ಗಮನಿಸುತ್ತಿದ್ದಾರೆ. ನಾವು ರಾಜಕಾರಣಿಗಳು ಇನ್ನೊಬ್ಬರಿಗೆ ಉದಾಹರಣೆ ಆಗುವ ಹಾಗೆ ಇರಬೇಕು. ತನಿಖೆ ಪೂರ್ತಿ ಆಗಲಿ, ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಅಂಕಲಗಿಯಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಧರಣಿ ನಡೆಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಕೂಡ ಭಾಗಿಯಾದರು. ಈ ವೇಳೆ, ರಮೇಶ್ ಬೆಂಬಲಿಗರು ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಪ್ರತಿಭಟನೆಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಣಿಯ ಶ್ರೀದೇವಿ ತಡಕೋಳ, ರಮೇಶ್ ಜಾರಕಿಹೊಳಿ ಅವರನ್ನ ಸೋಲಿಸೋಕೆ ಆಗಲ್ಲ ಅಂತ ಹಿಂದಿನ ಬಾಗಿಲಿಂದ ಬಂದು ಈ ಕೈವಾಡ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಬಾಳ ಚಂದಾಗಿ ಮಾತಾಡ್ತಾರೆ. ಪ್ರಕರಣದ ತನಿಖೆಯಾದ್ರೆ ಸತ್ಯಾಸತ್ಯತೆ ಹೊರ ಬರುತ್ತೆ. ಅವಳು ಒಂದು ಹೆಣ್ಣು. ಈ ವಿಡಿಯೋ ನೋಡಿ ಅವಳಿಗೆ ನೋವು ಆಗಲ್ವಾ? ಪ್ರತಿಪಕ್ಷದಲ್ಲಿ ಇರಬಹುದು, ಆದ್ರೆ ಈ ವಿಡಿಯೋದಿಂದ ಇಡೀ ಹೆಣ್ಣು ಕುಲಕ್ಕೆ ಅವಮಾನವಾಗಿದೆ ಎಂದು ಆರೋಪಿಸಿದರು.