ಹೆರಿಗೆಗೆ ಬಂದ ತಾಯಿ-ಮಗು ಸಾವು, ವೈದ್ಯರ ನಿರ್ಲಕ್ಷ್ಯದ ಆರೋಪ | Janata news
ದಾವಣಗೆರೆ : ಹೆರಿಗೆಗೆ ಬಂದ ತಾಯಿ-ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಕಾವ್ಯ (21) ಮೃತಪಟ್ಟ ಮಹಿಳೆಯಾಗಿದ್ದಾಳೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಲವಂಜಿ ಗ್ರಾಮದ ನಿವಾಸಿ ಕಾವ್ಯ ತಡರಾತ್ರಿ ಹೆರಿಗೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದ್ದರು.
ಸೂಕ್ತ ಚಿಕಿತ್ಸೆ ನೀಡಬೇಕಿದ್ದ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರಿಂದ ಕಾವ್ಯ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಸಂಬಂಧಿಕರು ಆರೋಪಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ, ವೈದ್ಯರು ಹಾಗೂ ನರ್ಸ್ಗಳು ಬಲವಂತವಾಗಿ ನಾರ್ಮಲ್ ಡೆಲಿವರಿ ಮಾಡಿಸಲು ಪ್ರಯತ್ನಿಸಿದ್ದು, ಗರ್ಭಿಣಿ ಕಾವ್ಯ ಹೊಟ್ಟೆಯನ್ನು ಜೋರಾಗಿ ಒತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಗರ್ಭದಲ್ಲಿಯೇ ಮಗು ಕಣ್ಮುಚ್ಚಿದ್ದು, ಮಹಿಳೆಯೂ ಕೂಡ ಸಾವನ್ನಪ್ಪಿದ್ದಾಳೆ ಎಂದು ಆಕೆ ಪೋಷಕರು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರೂ ಕೂಡ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.