ಸಫಾರಿ ವೇಳೆ 2 ಆನೆಗಳ ದಾಳಿ; ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಜೀವ, ವಿಡಿಯೋ ವೈರಲ್! | Janata news
ಚಾಮರಾಜನಗರ : ಸಫಾರಿಗೆ ತೆರಳಿದ್ದ ವೇಳೆ ಹಿಂದಿನಿಂದ ಒಂದು ಆನೆ ದಾಳಿ ಮಾಡಿದರೆ ಮುಂದಿನಿಂದಲೂ ಸಲಗವೊಂದು ಜೀಪನ್ನು ಅಡ್ಡ ಹಾಕಿ ಪ್ರವಾಸಿಗರನ್ನು ನಡುಗಿಸಿದ ಘಟನೆ ಚಾಮರಾಜನಗರದ ಕೆ.ಗುಡಿಯಲ್ಲಿ ನಡೆದಿದೆ. ಈ ಸಮಯದಲ್ಲಿ ಕಾರು ಚಾಲಕ ಸಮಯ ಪ್ರಜ್ಞೆ ಮೆರೆದಿದ್ದರಿಂದ ಪ್ರವಾಸಿಗರ ಜೀವ ಉಳಿದಿದೆ.
ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಇದೇ ಸಮಯದಲ್ಲಿ ಮುಂದಿನಿಂದಲೂ ಮತ್ತೊಂದು ಸಲಗ ಅಡ್ಡಹಾಕಿದ್ದು, ಪ್ರವಾಸಿಗರು ಬೆಚ್ಚಿ ಬೀದಿದ್ದಾರೆ.
ವಾಹನ ಚಲಿಸುವ ವೇಳೆ ಆನೆಗಳ ಗುಂಪು ಕಾಡಿನ ರಸ್ತೆಯ ಪಕ್ಕದಲ್ಲಿ ನಿಂತಿದೆ. ಆದರೆ ಇದ್ದಕ್ಕಿದ್ದಂತೆ ಒಂದು ಆನೆ ಸಫಾರಿಯ ಜೀಪ್ ನ ಹಿಂಭಾಗದಲ್ಲಿ ಓಡಿಸಿಕೊಂಡು ಬಂದಿದೆ. ಚಾಲಕ ನಾಗರಾಜು ವೇಗವಾಗಿ ವಾಹನ ಚಾಲನೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ವಾಹನದ ಮುಂಭಾಗದಲ್ಲಿ ಮತ್ತೊಂದು ಆನೆ ಬಂದಿದೆ, ಆದರೂ ಕೂಡ ಜೀಪ್ ಚಾಲಕ ಧೈರ್ಯದಿಂದ ವಾಹನ ಚಲಾಯಿಸಿದ್ದಾರೆ. ವಾಹನ ಜೋರಾಗಿ ಚಲಾಯಿಸಿದ್ದರಿಂದ ಆನೆ ವೇಗವಾಗಿ ಓಡಿ ರಸ್ತೆಯಿಂದ ಸರಿದು ಕಾಡಿಗೆ ಓಡಿದೆ.
ಆದರೆ, ಎರಡೆರಡು ಸಲಗಗಳು ಸಫಾರಿ ವಾಹನ ಅಡ್ಡಗಟ್ಟಿದ ಘಟನೆಗಳು ತೀರಾ ಅಪರೂಪ. ಚಾಲಕನ ಸಮಯ ಪ್ರಜ್ಞೆಗೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.