ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮಾಸೀಮ್ ರಿಜ್ವಿ ಶಿರಚ್ಚೇದನಕ್ಕೆ 11 ಲಕ್ಷ ಘೋಷಿಸಿದ್ದ ವಕೀಲನ ವಿರುದ್ಧ ಎಫ್ಐಆರ್ | Janata news
ಲಕ್ನೋ : ಉತ್ತರ ಪ್ರದೇಶ ರಾಜ್ಯ ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಾಸೀಮ್ ರಿಜ್ವಿ ಅವರ ಶಿರಚ್ಚೇದನ ಮಾಡುವವರಿಗೆ 11 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವಕೀಲ ಅಮಿರುಲ್ ಹಸನ್ ಜೈದಿ ವಿರುದ್ಧ ಯುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ, ಹಸನ್ ಜೈದಿ ಘೋಷಣೆ ಮಾಡಿದ ವೀಡಿಯೊ ವೈರಲ್ ಆಗುತ್ತಿದ್ದಂತೆ, ವಕೀಲನ ವಿರುದ್ಧ ರಾಜ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಕೀಲ ಹಸನ್ ಮಾಡಿದ ಆಕ್ಷೇಪಾರ್ಪ ಭಾಷಣ ಆಧರಿಸಿ ಪೊಲೀಸರು ದ್ವೇಷ ಹರಡುವ ಹಾಗೂ ಕ್ರಿಮಿನಲ್ ಬೆದರಿ ಹಾಕಿದ ಆರೋಪದಡಿ ಐಪಿಸಿ ಸೆಕ್ಷನ್ 505(2) ಹಾಗೂ 506ರ ಅಡಿ ಕೇಸ್ ದಾಖಲಿಸಿದ್ದಾರೆ.
ಹಿಂಸೆಯನ್ನು ಉತ್ತೇಜಿಸುತ್ತದೆ ಎನ್ನುವ ಕಾರಣದಿಂದ ಕುರಾನ್ ನಲ್ಲಿರುವ 26 ಪದ್ಯಗಳನ್ನು ತೆಗೆದು ಹಾಕುವಂತೆ, ವಾಸೀಮ್ ರಿಜ್ವಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೊರೆಹೊಗಿದ್ದರು. ಖುರಾನ್ನಲ್ಲಿರುವ 26 ಪದ್ಯಗಳನ್ನು ಜಿಹಾದ್ಗಾಗಿ ಬಳಸಲಾಗುತ್ತಿದೆ. ಅದ್ದರಿಂದ, ಈ 26 ಪದ್ಯಗಳನ್ನು ಖುರಾನ್ನಿಂದ ತೆಗೆದು ಹಾಕುವಂತೆ ವಾಸೀಮ್ ರಿಜ್ವಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಸಿದ್ದರು.
ರಿಜ್ವಿ ಅವರ ನಡೆ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಪ ಸಮುದಾಯ ಮಂಡಳಿ ವಾಸೀಮ್ ರಿಜ್ವಿಗೆ ನೊಟೀಸ್ ನೀಡಿತ್ತು. ಇದರ ಬೆನ್ನಲ್ಲೇ ಅಮಿರುಲ್ ಹಸನ್ ಜೈದಿ ಎನ್ನುವ ವಕೀಲರೊಬ್ಬರು, ಪವಿತ್ರ ಖುರಾನ್ ಹಾಗೂ ಇಸ್ಲಾಂ ಧರ್ಮಕ್ಕೆ ರಿಜ್ವಿ ಅಪಮಾನ ಮಾಡಿದ್ದಾರೆ. ಹೀಗಾಗಿ ರಿಜ್ವಿ ಶಿರಚ್ಚೇದನಕ್ಕೆ 11 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.