ನೇಣು ಬಿಗಿದುಕೊಂಡು ಎರಡು ಮಕ್ಕಳ ತಾಯಿ ಆತ್ಮಹತ್ಯೆ! | Janata news
ಚಿಕ್ಕಬಳ್ಳಾಪುರ : ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಪ್ರಭಾಕರ್ ಬಡಾವಣೆಯಲ್ಲಿ ನಡೆದಿದೆ.
ನಳಿನಿ (36) ಮೃತ ದುರ್ದೈವಿ. ಶಿಡ್ಲಘಟ್ಟ ಮೂಲದ ನಳಿನಿಯನ್ನು 16 ವರ್ಷದ ಹಿಂದೆ ಚಿಂತಾಮಣಿ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಶ್ರೀರಾಮ ಎಂಬುವರ ಜತೆ ಮದುವೆ ಮಾಡಲಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಪತಿ ಶ್ರೀರಾಮ ಮದುವೆಯಾದಗಿಂದಲೂ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದನಂತೆ. ಹಣ ತರದಿದ್ದಾಗ ಹೊಡೆಯುತ್ತಿದ್ದನು. ಅಲ್ಲದೆ ಪತ್ನಿಯನ್ನು ತವರು ಮನೆಗೆ ಕಳುಹಿಸುತ್ತಿದ್ದನಂತೆ. ಹಣಕ್ಕಾಗಿ ಮಾನಸಿಕ-ದೈಹಿಕ ಹಿಂಸೆ ನೀಡುತ್ತಿದ್ದ.
ಪದೆ ಪದೇ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿದ್ದರಿಂದ ನೊಂದ ನಳಿನಿ, ತನ್ನ ಹಿರಿ ಮಗಳನ್ನ ಶಾಲೆಗೆ ಕಳುಹಿಸಿ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಮ್ಮನನ್ನು ಕಳೆದುಕೊಂಡ ಹೆಣ್ಣುಮಕ್ಕಳಿಬ್ಬರ ಆಕ್ರಂದನ ಮುಗಿಲು ಮುಟ್ಟಿತ್ತು.
ನನ್ನ ಮಗಳು ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರದಕ್ಷಿಣೆ ಕಿರುಕುಳ ಕೊಟ್ಟು ಮಗಳ ಸಾವಿಗೆ ಆಕೆಯ ಗಂಡನೇ ಕಾರಣ ಆಗಿದ್ದಾನೆ. ನಮಗೆ ನ್ಯಾಯ ಕೊಡಿಸಿ ಮೃತಳ ತಾಯಿ ಒತ್ತಾಯಿಸಿದ್ದಾರೆ.
ಘಟನೆ ನಂತರ ಗಂಡ ಪರಾರಿಯಾಗಿದ್ದಾನೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.