130 ಗ್ರಾಹಕರಿಗೆ 12 ಲಕ್ಷ ವಂಚನೆಗೈದ ತಮಿಳುನಾಡು ಮೂಲದ ತಂಡದ ಬಂಧನ | Janata news
ಕಾರವಾರ : ಅಮೋಘ ಟ್ರೇಡರ್ಸ್ ಹೆಸರಿನಲ್ಲಿ ನಗರದ 130 ಗ್ರಾಹಕರಿಂದ 12 ಲಕ್ಷ ಹಣ ಪಡೆದು ವಂಚನೆಗೈದ ತಮಿಳುನಾಡಿನ 6 ಜನ ವಂಚಕರ ಜಾಲವನ್ನು 2017ರ ಬಿಯೂಡಿಎಸ್ ಕಾಯ್ದೆಯಡಿ ಭೇದಿಸಿದ್ದು, ಓರ್ವನನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಜಾರಿಗೊಳಿಸಿರುವ ಬ್ಯಾನ್ಇಂಗ್ ಆಫ್ ಅನ್ ರೆಗ್ಯುಲೇಟೆಡ್ ದೆಪೋಸಿಟ್ಸ ಆಕ್ಟ್ 2017(ಬಿಯೂಡಿಎಸ್) ಅಡಿಯಲ್ಲಿ ಈ ವಂಚನೆಯ ಕುರಿತು ದಾಖಲಾದ ದೂರಿನ ಅನ್ವಯ ವಂಚನೆಗೆ ರೂಪುರೇಷೆ ಹೆಣೆಯುವ ಹಂತದಲ್ಲಿಯೇ ಪ್ರಕರಣವನ್ನು ಭೇದಿಸಿದ ರಾಜ್ಯದಲ್ಲಿಯೇ ಪ್ರಥಮ ಪ್ರಕರಣ ಇದಾಗಿದೆ. ಬಂಧಿತ ವ್ಯಕ್ತಿ ಶಿವರಾಜು ರೆಂಗರಸು(38) ಎಂದು ಗುರುತಿಸಲಾಗಿದ್ದು, ವಂಚನೆ ತಂಡದಲ್ಲಿದ್ದಂತಹ 6 ಜನರೂ ತಮಿಳುನಾಡಿನ ತಂಜಾವೂರಿನವರು, ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದರು.
ಪ್ರಕರಣದ ಹಿನ್ನೆಲೆ:
ಬಂಧಿತ ಆರೋಪಿ ಶಿವರಾಜು ರೆಂಗರಸು, ನಾಸೀರ್ ಮತ್ತು ಗೋವಿಂದರಾಜು ಎಂಬುವರು ಕಾರವಾರದ ಕಾಜುಬಾಗ್ದಲ್ಲಿ ಅಂಗಡಿಯನ್ನು ಬಾಡಿಗೆಗೆ ಪಡೆದು 2021ರ ಫೆ. 13ರಿಂದ ಅಮೋಘ ಟ್ರೇಡರ್ಸ್ ಹೆಸರಿನಲ್ಲಿ ಅಂಗಡಿ ಪ್ರಾರಂಭಿಸಿದ್ದಾರೆ. ಅಂಗಡಿಯಲ್ಲಿ ಕೆಲವು ದಿನ ಬಳಕೆಯ ವಸ್ತುಗಳು, ಎಲ್ಲ ಬಗೆಯ ಗೃಹೋಪಯೋಗಿ, ಇಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಜೋಡಿಸಿಟ್ಟು ರಿಯಾಯಿತಿ ದರದಲ್ಲಿ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಸಾರ್ವಜನಿಕರಿಗೆ ತಿಳಿಸುತ್ತಿದ್ದರು.
ನಂತರ ಅವುಗಳನ್ನು ಶೇ.45ರ ಕಡಿಮೇ ದರಕ್ಕೆ ನೀಡಿವುದಾಗಿ ನಂಬಿಸಿ ಗ್ರಾಹಕರಿಂದ ಮುಂಗಡವಾಗಿ ಹಣವನ್ನು ಪಡೆಯುತ್ತಿದ್ದರು. ಮೊದಲು ಬಂದ ಕೆಲವು ಗ್ರಾಹಕರಿಗೆ ಪ್ರಥಮ ಆಧ್ಯತೆ ಮೇರೆಗೆ ಅತೀ ಕಡಿಮೆ ದರದಲ್ಲಿ ವಸ್ತುಗಳನ್ನು ನೀಡುವುದಾಗಿ ತಿಳಿಸಿ ಜನರಿಂದ ಹಣ ಪಡೆದು ಸ್ವಲ್ಪ ದಿನಗಳ ನಂತರ ಮೊದಲು ಹಣ ನೀಡಿದವರಿಗೆ ವಸ್ತುಗಳನ್ನು ಕೊಟ್ಟು ಜನರನ್ನು ಆಕರ್ಷಿಸುತ್ತಿದ್ದರು. ಹೀಗಾಗಿ ಆರೋಪಿಗಳ ಆಮೀಶಕ್ಕೆ ಒಳಗಾಗಿ ನಗರದ ಸುಮಾರು 130ಕ್ಕೂ ಹೆಚ್ಚಿನ ಗ್ರಾಹಕರು ಸುಮಾರು 12 ಲಕ್ಷ ಹಣವನ್ನು ಆರೋಪಿತರಿಗೆ ನೀಡಿ ವಸ್ತುಗಳನ್ನು ಕಾಯ್ದಿರಿಸಿದ್ದರು. ಆದರೆ ವಂಚಕರು ಗ್ರಾಹಕರಿಂದ ಹಣ ಪಡೆದುಕೊಂಡು ಕಾರವಾರದಿಂದ ಪರಾರಿಯಾಗಿದ್ದರು.
ಈ ರೀತಿ ವಂಚನೆಗೆ ಒಳಗಾದವರ ಪೈಕಿ ನಗರದ ಮಾಡಿಬಾಗ ಕಡವಾಡದ ನಿವಾಸಿ ಸಮರ್ಥ ನೇತಾಳಕರ್ ಎಂಬುವರು ಒಬ್ಬರಾಗಿದ್ದಾರೆ. ವಂಚನೆಗೊಳಗಾದ ಸಮರ್ಥ ನೇತಾಳಕರ್ ಆರೋಪಿಗಳ ಬಳಿ ಗೃಹ ಬಳಕೆಯ ಸೋಫಾ, 2 ಕಬ್ಬಿಣದ ಮಂಚ, ವಾಸಿಂಗ್ ಮಶೀನ್, ಕಪಾಟು ಹಾಗೂ ಇತರೆ ಅಡುಗೆ ಪಾತ್ರೆಗಳನ್ನು ತಂದುಕೊಡುವಂತೆ ಮುಂಗಡವಾಗಿ 1 ಲಕ್ಷ 13ಸಾವಿರ ರೂ. ಹಣವನ್ನು ನೀಡಿದ್ದಾರೆ. ನಂತರ ಆರೋಪಿಗಳು ವಸ್ತುಗಳನ್ನು ತಂದುಕೊಡದೇ ವಂಚಿಸಿದ್ದು, ಈ ಕುರಿತು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರು ಜನ ವಂಚಿತರ ತಂಡವನ್ನು ಭೇದಿಸಲಾಗಿದ್ದು, ಈ ಪೈಕಿ ಓರ್ವನನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಉಳಿದ ಐವರನ್ನೂ ಆದಷ್ಟು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್ಪಿ ಅವರು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ, ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿಯವರ ಮಾರ್ಗದರ್ಶನದಲ್ಲಿ ಕಾರವಾರ ವೃತ್ತ ನಿರೀಕ್ಷಕ ಸಂತೋಷ ಶೆಟ್ಟಿ, ಪಿಎಸ್ಐಗಳಾದ ಸಂತೋಷ ಕುಮಾರ, ಎಸ್.ಬಿ. ಪೂಜಾರಿ, ಹಾಗೂ ಸಿಬ್ಬಂದಿನ್ನೊಳಗೊಂಡ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ವಂಚಕರ ಜಾಲವನ್ನು ಭೇದಿಸಲಾಗಿದೆ ಎಂದರು.