ಪ್ರಿಯಕರನಿಗೆ ನಿದ್ರೆ ಮಾತ್ರೆ ನೀಡಿ, ಕುರ್ಚಿಗೆ ಕಟ್ಟಿ ಗಂಟಲು ಸೀಳಿ ಬರ್ಬರ ಕೊಲೆ! | Janata news
ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಗ್ರಾಮದಲ್ಲಿ ಪ್ರೇಯಸಿಯೇ ಪ್ರಿಯಕರನನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ಆಶಿಶ್ ಡೇ (30) ಮತ್ತು ಮಾಲಾ ದಂಪತಿ ತೋರಣಗಲ್ ಗ್ರಾಮದಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿ ಜೀವನ ನಡೆಸಲು ಆರಂಭಿಸಿದ್ದರು. ತಾವು ಪಶ್ಚಿಮ ಬಂಗಾಳದಿಂದ ಬಂದಿದ್ದು, ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವುದಾಗಿ ಆಶಿಶ್ ತಿಳಿಸಿದ್ದ.
ಆದರೆ ಬಾಡಿಗೆ ಮನೆ ಪಡೆದ ನಾಲ್ಕೇ ದಿನಗಳಲ್ಲಿ ಮನೆಗೆ ಬೀಗ ಹಾಕಿದೆ. ಬಹುಶಃ ಕೆಲಸಕ್ಕೆ ತೆರಳಿರಬೇಕು ಎಂದು ಮನೆಯ ಮಾಲೀಕ ಸುಮ್ಮನಾಗಿದ್ದಾನೆ. ಆದರೆ ಕೆಲ ದಿನಗಳಾದ ನಂತರ ಆ ಮನೆಯಿಂದ ದುರ್ವಾಸನೆ ಬರಲಾರಂಭಿಸಿದೆ.
ಆ ಕಾರಣ ಮನೆಯ ಬಾಗಿಲನ್ನು ತೆರೆದ ಮಾಲೀಕ ಒಳಗೆ ಹೋಗಿ ಪರಿಶೀಲನೆ ನಡೆಸಿದ್ದಾನೆ. ಆಗ ಗಂಟಲು ಸೀಳಿ ಬರ್ಬರವಾಗಿ ಹತ್ಯೆಗೀಡಾದ ಆಶಿಶ್ ಮೃತದೇಹ ಆತನಿಗೆ ಕಾಣಿಸಿದೆ. ಕೊಲೆಯಾದ ವ್ಯಕ್ತಿಯನ್ನು ಕುರ್ಚಿಗೆ ಕಟ್ಟಿ ಗಂಟಲು ಸೀಳಿರುವುದು ಕಂಡುಬಂದಿದೆ.
ಹತ್ಯೆ ಬಳಿಕ ಪಶ್ಚಿಮ ಬಂಗಾಳದ ಮೂಲದ ಪ್ರಿಯತಮೆ ಮಾಯಾ ಪರಾರಿಯಾಗಿದ್ದಾಳೆ. ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ಗಲಾಟೆ ನಡೆದಿದೆ ಎನ್ನಲಾಗ್ತಿದೆ. ಪ್ರಿಯಕರನಿಗೆ ಮೊದಲು ನಿದ್ರೆ ಮಾತ್ರೆ ನೀಡಿ ಬಳಿಕ ಪ್ರೇಯಸಿ ಹತ್ಯೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಕೊಲೆಗೆ ಸಹಕರಿಸಿದ ಮುತ್ತುಸ್ವಾಮಿ ಹಾಗೂ ರಮೇಶ್ ಎಂಬುವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ಆಶಿಷ್ನು ಆರೋಪಿಗಳಾದ ಮಾಯಾ, ಮುತ್ತುಸ್ವಾಮಿ, ರಮೇಶ್ ಎಲ್ಲರೂ ಒಂದೇ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.