ಬೆಳಗಾವಿಯಲ್ಲಿ ಡಿಕೆಶಿ ವಿರುದ್ಧ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ! | Janata news
ಬೆಳಗಾವಿ : ನಗರಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಡಿ.ಕೆ.ಶಿವಕುಮಾರ್ ಬರುತ್ತಿದ್ದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಡಿಕೆಶಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಭಾನುವಾರ ಮಧ್ಯಾಹ್ನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ. ಕೆ. ಶಿವಕುಮಾರ್ಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ವಿಮಾನ ನಿಲ್ದಾಣದ ಹೊರಗೆ ಅವರ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ವಿಮಾನ ನಿಲ್ದಾಣದಿಂದ ಡಿ. ಕೆ. ಶಿವಕುಮಾರ್ ಹೋಟೆಲ್ಗೆ ಹೋಗುವಾಗ ಅವರ ಬೆಂಗಾವಲು ವಾಹನದ ಮೇಲೆ ಚಪ್ಪಲಿ ತೂರಲಾಯಿತು. ಕಪ್ಪು ಬಾವುಟ ಎಸೆಯಲಾಯಿತು, ಕಲ್ಲನ್ನು ತೂರಲಾಯಿತು. ಡಿ. ಕೆ. ಶಿವಕುಮಾರ್ ಬೆಂಬಲಿಗರ ವಾಹನದ ಗಾಜು ಪುಡಿಯಾಗಿದೆ.
ಕಾರು ಅಡ್ಡಗಟ್ಟಿದರು ಡಿ. ಕೆ. ಶಿವಕುಮಾರ್ ಬೆಳಗಾವಿ ನಗರ ಪ್ರವೇಶಿಸುತ್ತಿದ್ದಂತೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಅವರ ಕಾರನ್ನು ಅಡ್ಡಗಟ್ಟಿದರು. ಕಾರಿಗೆ ಗುದ್ದಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬೆಳಗಾವಿ ವಿಮಾನ ನಿಲ್ದಾಣದ ಬಳಿ ಕಾರಿನಲ್ಲಿ ಡಿಕೆಶಿ ತೆರಳುತ್ತಿದ್ದಾಗ ರಸ್ತೆಯುದ್ದಕ್ಕೂ ನಿಂತಿದ್ದ ರಮೇಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಗೋ ಬ್ಯಾಕ್ ಡಿಕೆಶಿ ಎಂದು ಕೂಗಿ, ಕಾರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.