ಗೋ ಬ್ಯಾಕ್ ಎಂದು ಕೂಗಿ, ನನ್ನನ್ನು ಸ್ವಾಗತಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರಿಗೆ ಅಭಿನಂದನೆಗಳು: ಡಿ.ಕೆ. ಶಿವಕುಮಾರ್ ಟಾಂಗ್ | Janata news
ಬೆಳಗಾವಿ : ಲೋಕಸಭಾ ಉಪಚುನಾವಣಾ ಕ್ಷೇತ್ರದ ಪ್ರಚಾರಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿಕೆ ಶಿವಕುಮಾರ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ತಮ್ಮ ವಿರುದ್ಧ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಗೋ ಬ್ಯಾಕ್ ಎಂದು ಘೋಷಣೆ ಕೂಗುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿ.. ನನ್ನ ಸ್ವಾಗತ ಮಾಡ್ತಿದ್ದಾರೆ.. ಬಹಳ ಸಂತೋಷ ಎಂದರು.
ತಮ್ಮ ವಿರುದ್ಧ ಕಪ್ಪು ಪಟ್ಟಿ ತೊಟ್ಟು, ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರಿಗೆ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಗೆ ನನ್ನನ್ನು ಸ್ವಾಗತಿಸುತ್ತಿರುವುದಕ್ಕೆ ಅಭಿನಂದಿಸುವೆ. ಘನಕಾರ್ಯಕ್ಕೆ ಸ್ವಾಗತ ಮಾಡುತ್ತಿದ್ದಾರೆ. ನನ್ನ ವಿರುದ್ಧದ ಪ್ರತಿಭಟನೆಗೆ ಅಭಿನಂದನೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಸುರೇಶ್ ಅಂಗಡಿಯವರ ನಿಧನದಿಂದ ಈ ಬೈಎಲೆಕ್ಷನ್ ಬಂದಿದೆ. ಬೆಳಗಾವಿ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಲಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಸೇರಿದಂತೆ ಎಲ್ಲರೂ ಒಮ್ಮತದ ಅಭ್ಯರ್ಥಿ, ಸತೀಶ್ ಜಾರಕಿಹೊಳಿಗೆ ನಿನ್ನೆಯೇ ಬಿಫಾರ್ಮ್ ಕೊಟ್ಟಿದ್ದೇವೆ. ಸತೀಶ್ ಜಾರಕಿಹೊಳಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಸೌಮ್ಯ ಸಜ್ಜನ ಅಭ್ಯರ್ಥಿಯನ್ನ ಬೆಳಗಾವಿ ಕೊಟ್ಟಿದೆ. ಅವರನ್ನ ಪಾರ್ಲಿಮೆಂಟ್ಗೆ ಕಳಿಸಲು ಒಕ್ಕೊರಲಿನಿಂದ ಆಶೀರ್ವಾದ ಮಾಡ್ತಿದ್ದಾರೆ. ಪಾರ್ಲಿಮೆಂಟ್ನಲ್ಲಿ 25 ಜನ ಹೋಗಿದ್ದರೂ ಕೂಡ ಒಬ್ಬರೂ ಧ್ವನಿ ಎತ್ತಿಲ್ಲ. ಸತೀಶ್ ಜಾರಕಿಹೊಳಿಯವರನ್ನ ಗೆಲ್ಲಿಸ್ತಾರೆ ಎಂಬ ನಂಬಿಕೆ ಇದೆ ಎಂದರು.