ಸಿಡಿ ಪ್ರಕರಣ: ಎಸ್ಐಟಿ ಮುಂದೆ ಹಾಜರಾದ ರಮೇಶ್ ಜಾರಕಿಹೊಳಿ | Janata news
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.
ಆಡುಗೋಡಿ ಟೆಕ್ನಿಕಲ್ ಸೆಂಟರ್ನಲ್ಲಿ ವಿಚಾರಣೆ ಹಾಜರಾಗಿದ್ದಾರೆ. ಸಿಡಿ ಯುವತಿ ಕೋರ್ಟ್ಗೆ ಪತ್ರ ಮುಖೇನ ಮೊರೆಹೋಗಿದ್ದಾಳೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎಸ್ಐಟಿ ಪೊಲೀಸರು ಅದೇ ಸಮಯದಲ್ಲಿ ತ್ವರಿತವಾಗಿ ರಮೇಶ್ ಜಾರಕಿಹೊಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಪೊಲೀಸರು ಸೂಚಿಸಿದ್ದರು. ಅದರಂತೆ ರಮೇಶ್ ಜಾರಕಿಹೊಳಿ ಇದೀಗ ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದಾರೆ.
ಆಡುಗೋಡಿಯಲ್ಲಿರುವ ಎಸ್ಐಟಿ ಟೆಕ್ನಿಕಲ್ ವಿಂಗ್ ಎದುರು ವಿಚಾರಣೆಗೆ ಸೋಮವಾರ ಬೆಳಗ್ಗೆ 10ಕ್ಕೆ ಹಾಜರಾಗುವಂತೆ ಬೆಂಗಳೂರಿನ ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಜಾರಕಿಹೊಳಿಗೆ ನೋಟಿಸ್ ನೀಡಿದ್ದರು.
ಅದರಂತೆ ತಮ್ಮ ಆಪ್ತ, ಮಾಜಿ ಎಂಎಲ್ಎ ನಾಗರಾಜ್ ಹಾಗೂ ವಕೀಲರ ಜೊತೆ ರಮೇಶ್ ಜಾರಕಿಹೊಳಿ ವಿಚಾರಣೆಗೆ ಆಗಮಿಸಿದ್ದಾರೆ.
ಈ ಸಿಡಿ ಪ್ರಕರಣ ಇನ್ನೂ ಎಸ್ಐಟಿಗೆ ವರ್ಗಾವಣೆಯಾಗಿಲ್ಲ, ಕಬ್ಬನ್ಪಾರ್ಕ್ ಠಾಣೆಯಲ್ಲೇ ಪ್ರಕರಣವಿರುವ ಕಾರಣ, ಟೆಕ್ನಿಕಲ್ ವಿಂಗ್ನಲ್ಲಿ ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಮಾರುತಿ ಆಗಮಿಸಿದ್ದಾರೆ, ಅವರೇ ವಿಚಾರಣೆ ನಡೆಸಲಿದ್ದಾರೆ. ಕೇಂದ್ರ ವಲಯ ಡಿಸಿಪಿ ಅನುಚಿತ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.