ಸಾರಿಗೆ ನೌಕರರು ಮುಷ್ಕರ ಆರಂಭಿಸಿದರೆ ಪರ್ಯಾಯ ವ್ಯವಸ್ಥೆ ಮೂಲಕ ಸಾರಿಗೆ ಸೇವೆ | Janata news
ಬೆಂಗಳೂರು : ಸಾರಿಗೆ ನೌಕರರು ಸರ್ಕಾರದ ಮುಂದೆ ಹತ್ತು ಬೇಡಿಕೆಗಳನ್ನು ಇಟ್ಟಿದ್ದು, ಸರ್ಕಾರಿ ನೌಕರರಂತೆ ಪರಿಗಣಿಸಬೇಕೆಂಬ ಬೇಡಿಕೆಯನ್ನು ಬಿಟ್ಟು ಉಳಿದ ಒಂಬತ್ತು ಬೇಡಿಕೆಗಳನ್ನೂ ಈಡೇರಿಸುವ ಪ್ರಯತ್ನ ನಡೆದಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ಮೂರು ತಿಂಗಳ ಹಿಂದೆ ಸಾರಿಗೆ ನೌಕರರು ಪ್ರತಿಭಟನೆ ಮಾಡಿದ್ದರು. ಆಗ 10 ಬೇಡಿಕೆಗಳನ್ನ ಇಟ್ಟಿದ್ದರು. ಅದರಲ್ಲಿ ಸರ್ಕಾರಿ ನೌಕರರನ್ನಾಗಿ ಮಾಡಲು ಆಗಲ್ಲ, ಉಳಿದ 9 ಬೇಡಿಕೆಗಳನ್ನ ಈಡೇರಿಸುತ್ತೇವೆ ಅಂತಾ ಭರವಸೆ ಕೊಟ್ಟಿದ್ದೆವು. ಈಗಾಗಲೇ 8 ಬೇಡಿಕೆಗಳು ಈಡೇರಿವೆ.
9 ನೇ ಬೇಡಿಕೆ 6 ನೇ ವೇತನ ಆಯೋಗದ ಸಮಾನಾಂತರವಾಗಿ ವೇತನ ನೀಡಬೇಕು ಅಂತಾ ಹೇಳಿದ್ದಾರೆ. ಆ ಬಗ್ಗೆ ಇವತ್ತು ಆರ್ಥಿಕ ಇಲಾಖೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಎರಡ್ಮೂರು ದಿನಗಳಲ್ಲಿ ಈ ಬಗ್ಗೆ ಸಾಧಕ-ಬಾಧಕಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಹಾಗಾಗಿ ಮುಷ್ಕರಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.
ಮುಷ್ಕರ ಮಾಡಿದರೆ ಜನ ಸಾಮಾನ್ಯರು, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ನಾವು ಯಾವತ್ತೇ ಬೇಡಿಕೆ ಈಡೇರಿಸಿದರೂ 2020ರಿಂದ ಅರಿಯರ್ಸ್ ಕೊಟ್ಟೇ ಕೊಡುತ್ತೇವೆ. ಯಾವುದೇ ಆತುರದ ನಿರ್ಣಯ ತೆಗೆದುಕೊಂಡು, ಮುಷ್ಕರ ಮಾಡಬೇಡಿ ಎಂದರು.
ಒಂದು ವೇಳೆ ಪ್ರತಿಭಟನೆ ಮಾಡಿದರೆ ಪರ್ಯಾಯ ವ್ಯವಸ್ಥೆಯಾಗಿ 1200 ಖಾಸಗಿ ಬಸ್ ಬಳಸಿಕೊಳ್ತೇವೆ ಎಂದರು. ಸಾರಿಗೆ ನೌಕರರು ಮುಷ್ಕರ ಮಾಡಿದರೆ ಖಾಸಗಿ ವಾಹನಗಳನ್ನ ಸಂಚಾರಕ್ಕೆ ಬಳಸಿಕೊಳ್ಳುತ್ತೇವೆ. ಖಾಸಗಿ ಬಸ್ಗಳಿಗೆ ಪರ್ಮಿಟ್ ಕೊಟ್ಟು, ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ತೆಗೆದುಕೊಳ್ಳುತ್ತೇವೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.