ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ಮಧ್ಯೆ ಬಗೆ ಹರಿಸಿಕೊಳ್ಳಬೇಕಿತ್ತು: ರೇಣುಕಾಚಾರ್ಯ | Janata news
ಬೆಂಗಳೂರು : ಕೆ.ಎಸ್. ಈಶ್ವರಪ್ಪ ಅವರಂತಹ ಹಿರಿಯ ಸಚಿವರೇ ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ ಎಂದರೆ ಹೇಗೆ? ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಹರಿಸಿಕೊಳ್ಳಬೇಕಿತ್ತು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು. ರಾಜ್ಯಪಾಲರ ಮುಂದೆ ಯಾಕೆ ಹೋಗಬೇಕಿತ್ತು? ಹಿರಿಯರಿದ್ದಾರೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನು ಯಾರ ಪರವೂ ಅಲ್ಲ, ವಿರುದ್ದವೂ ಅಲ್ಲ. ಎಷ್ಟು ಸರಿ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.
ಇನ್ನು ಉಪಚುನಾವಣೆ ಸಂದರ್ಭದಲ್ಲಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಕೆಸರೆರಚಾಟ ಮಾಡಿದರೆ ಏನಾಗುತ್ತೆ? ಏನೇ ಸಮಸ್ಯೆ ಇದ್ದರೂ ಪ್ರಧಾನಿಗಳನ್ನು ಭೇಟಿ ಆಗಲಿ. ಪಕ್ಷದ ಉಸ್ತುವಾರಿ, ಸಂಘದ ಹಿರಿಯರ ಬಳಿ ಹೇಳಲಿ. ಆದರೆ, ಇದು ಒಳ್ಳೆ ಬೆಳವಣಿಗೆ ಅಲ್ಲ. ಇರೋ ಸಮಸ್ಯೆ ಬಗೆಹರಿಸಿಕೊಳ್ಳಲಿ, ಹಿರಿಯರಿದ್ದಾರೆ, ಪಕ್ಷ ಕಟ್ಟಿದವರು ಇವರು ಎಂದು ಹೇಳಿದ್ದಾರೆ.
ನಾವು 60 ಶಾಸಕರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡಿದ್ದರಿಂದ ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಈ ಮೊದಲು ಈಶ್ವರಪ್ಪ ಅವರಿಗೂ ಭೇಟಿ ಮಾಡಿ ಮನವಿ ಮಾಡಿದ್ದೆವು ಆದರೆ, ಅವರು ಸ್ಪಂದಿಸಿರಲಿಲ್ಲ. ಹೀಗಾಗಿ ವಿಧಿಯಿಲ್ಲದೆ ಸಿಎಂ ಅವರನ್ನು ಭೇಟಿ ಮಾಡಬೇಕಾಯಿತು ಎಂದು ಹೇಳಿದರು.