ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ರಾಜೀನಾಮೆ | ಜನತಾ ನ್ಯೂಸ್
ಮುಂಬೈ : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಮುಂಬೈ ಹೈಕೋರ್ಟ್ ಮೆಟ್ಟಲೇರಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರು ತಮ್ಮ ಪ್ರಯತ್ನದಲ್ಲಿ ಮೊದಲ ಭಾರಿಗೆ ಯಶಸ್ವಿಯಾಗಿದ್ದಾರೆ.
ಪರಂಬೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಗೆ ಬಾಂಬೆ ಹೈಕೋರ್ಟ್ ಸ್ಪಂದಿಸಿದ ಕೆಲವೇ ಗಂಟೆಗಳ ನಂತರ ಅನಿಲ್ ದೇಶ್ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೈಕೋರ್ಟ್ ಕೇಂದ್ರೀಯ ತನಿಖಾ ದಳ(ಸಿಬಿಐ) ನ ಪ್ರಾಥಮಿಕ ತನಿಖೆಗೆ ಆದೇಶಿಸಿದ ನಂತರ ದೇಶಮುಖ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, ನೈತಿಕ ಕಾರಣಗಳಿಗಾಗಿ ರಾಜ್ಯ ಗೃಹ ಸಚಿವರ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ, ಎಂದು ಬರೆದಿದ್ದಾರೆ.
ಹೈಕೋರ್ಟ್ ತೀರ್ಪಿನಲ್ಲಿ, 15 ದಿನಗಳ ಪ್ರಾಥಮಿಕ ವಿಚಾರಣೆಯ ನಂತರ ಮುಂದಿನ ಕ್ರಮಗಳ ಬಗ್ಗೆ ತನಿಖೆ ನಡೆಸಿ ತೀರ್ಮಾನಿಸಲು ಕೇಂದ್ರ ತನಿಖಾ ದಳಕ್ಕೆ(ಸಿಬಿಐ) ಸೂಚನೆ ನೀಡಲಾಗಿದೆ.
ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ರಾಜೀನಾಮೆಯು ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಘಾದಿಯಲ್ಲಿ ಸಂಚಲನ ಮೂಡಿಸಿದೆ. ಕುಖ್ಯಾತ ಮುಂಬೈ ಪೋಲಿಸ್ ಅಧಿಕಾರಿ ಸಚಿನ್ ವಾಜೆ ಜೊತೆ ಎನ್ಸಿಪಿ ಹಿರಿಯ ಮುಖಂಡ ಅನಿಲ್ ದೇಶ್ಮುಖ್ ಹೆಸರು ಪದೇಪದೇ ತಳಕು ಹಾಕುತ್ತಿದ್ದರೂ ತಮ್ಮ ವಿರುದ್ಧದ ಆರೋಪಗಳನ್ನು ದೇಶ್ಮುಖ್ ನಿರಾಕರಿಸುತ್ತಲೇ ಬಂದಿದ್ದರು. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕೂಡ ದೇಶ್ಮುಖ್ ಅವರನ್ನು ರಕ್ಷಿಸಲು ಮುಂದಾಗಿದ್ದರು. ಆದರೆ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸೋಮವಾರ ಅವರು ರಾಜೀನಾಮೆ ಸಲ್ಲಿಸಿದ್ದರು.