ಸೆಲ್ಫಿ ತೆಗೆಯಲು ಹೋಗಿ ಕಾಳಿ ನದಿಗೆ ಬಿದ್ದಿದ್ದ ಯುವ ಜೋಡಿ ಶವವಾಗಿ ಪತ್ತೆ | ಜನತಾ ನ್ಯೂಸ್
ಉತ್ತರ ಕನ್ನಡ : ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿಯ ಕಾಳಿ ಸೇತುವೆಯಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿದ್ದ ಯುವಕ ಮತ್ತು ಯುವತಿಯ ಶವ ಇಂದು ಪತ್ತೆಯಾಗಿದೆ.
ಮೃತಪಟ್ಟ ಯುವತಿಯನ್ನು ಧಾರವಾಡದಲ್ಲಿ ಕಲಿಯುತ್ತಿರುವ ಬೀದರ್ ಮೂಲದ ರಕ್ಷಿತಾ ಮತ್ತು ಯುವಕನನ್ನು ಬೀದರ್ ಮೂಲದ ಪುರುಷೋತ್ತಮ ಪಾಟೀಲ್ ಎಂದು ಗುರುತಿಸಲಾಗಿದೆ.
ಸೋಮವಾರ ದಾಂಡೇಲಿಯಿಂದ ಆಟೋ ರಿಕ್ಷಾ ಮೇಲೆ ಬಂದಿದ್ದ ಜೋಡಿ ಅಂಬಿಕಾ ನಗರದ ಸೂಪಾ ಅಣೆಕಟ್ಟೆಯ ಸಮೀಪ ಇರುವ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದರು. ಇಬ್ಬರೂ ಆಯ ತಪ್ಪಿ ಕಾಳಿ ನದಿಗೆ ಬಿದ್ದಿದ್ದರು. ಸೇತುವೆ ಮೇಲೆ ಸಿಕ್ಕ ಯುವತಿಯ ಮೊಬೈಲ್ ಆಧಾರದ ಮೇಲೆ ಆಕೆಯ ಮನೆಗೆ ಕರೆ ಮಾಡಿ ಗುರುತು ತಿಳಿದುಕೊಳ್ಳಲಾಗಿತ್ತು.
ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ ಮಂಗಳವಾರ ಇಬ್ಬರ ಶವವನ್ನು ಮೇಲಕ್ಕೆತ್ತಿದ್ದಾರೆ.
ರಾಮನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.