ಅಂಕೋಲಾ-ಹುಬ್ಬಳ್ಳಿ ರಾಷ್ಟೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : 2 ಸಾವು, 4 ಗಾಯ | ಜನತಾ ನ್ಯೂಸ್
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಹುಬ್ಬಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಮೃತ ದುರ್ದೈವಿಗಳನ್ನು ಅವರ್ಸಾದ ಗುರುಪ್ರಸಾದ ಅಣ್ವೇಕರ್(32) ಹಾಗೂ ಸಂಜನಾ ಸಂತೋಷ ರಾಯ್ಕರ್(7) ಎಂದು ಗುರುತಿಸಲಾಗಿದೆ. ಅಂಕೋಲಾದಿಂದ ಯಲ್ಲಾಪುರದ ಕಡೆಗೆ ಅತಿವೇಗದಿಂದ ಹೊರಟಿದ್ದ ಲಾರಿ ಕಾರಿಗೆ ಮುಖಾಮುಖಿ ಡಿಕ್ಕಿಹೊಡೆದ ಕಾರಣ ಕಾರು ಸಂಪೂರ್ಣ ದ್ವಂಸಗೊಂಡಿದೆ ಎನ್ನಲಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಸದಸ್ಯರಾದ, ಸಂತೋಷ ರಾಯ್ಕರ್, ಪತ್ನಿ ಅಶ್ವಿನಿ ರಾಯ್ಕರ್, ಮಗ ಸೋಹಂ ರಾಯ್ಕರ್ ಹಾಗೂ ಪ್ರೀತಂ ರೇವಣಕರ್ ಇವರಿಗೆ ಅಪಘಾತದಲ್ಲಿ ತೀವ್ರವಾದ ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುಪ್ರಸಾದ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿರುವ ತಮ್ಮ ಅಕ್ಕನ ಕುಟುಂಬವನ್ನು ಯುಗಾದಿ ಹಬ್ಬದ ನಿಮಿತ್ತ ಅವರ್ಸಾಕ್ಕೆ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದರು. ಅವರ ಸ್ನೇಹಿತ ಪ್ರೀತಮ್ ರೇವಣಕರ ಜೊತೆಗಿದ್ದರು.
ಯುಗಾದಿ ಹಬ್ಬದ ಆಚರಣೆಗೆಂದು ಊರಿಗೆ ಬರುತ್ತಿದ್ದ ಕುಟುಂಬ, ಅಪಘಾತದಿಂದ ಶೋಕದಲ್ಲಿ ಮುಳುಗಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.