14 ದಿನ ಮಾರ್ಗಸೂಚಿ ಪಾಲನೆಯಿಂದ ಕೊರೋನಾ ಚೈನ್ ಲಿಂಕ್ ಮುರಿಯಲು ಸಾಧ್ಯ | ಜನತಾ ನ್ಯೂಸ್
ಬೆಂಗಳೂರು : ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನ ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಹೀಗೆ ಮಾಡಿದರೆ 14 ದಿನದಲ್ಲಿ ಕೊರೋನಾ ಸೋಂಕಿನ ಚೈನ್ ಲಿಂಕ್ ಮುರಿಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸರ್ವಪಕ್ಷಗಳ ಸಭೆಯ ಬಳಿಕ ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ರವರೆಗೆ ನೈಟ್ ಕರ್ಪ್ಯೂ, ಮತ್ತು ವೀಕೆಂಡ್ ಕರ್ಪ್ಯೂ ತರಲಾಗಿದೆ ಎಂದು ಹೇಳಿದ್ದಾರೆ.
ಹೊಸ ಮಾರ್ಗಸೂಚಿಗಳನ್ನ ಕಟ್ಟುನಿಟ್ಟು ಪಾಲನೆ ಮಾಡುವುದರಿಂದ ಮೂರ್ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಲಿದೆ. ಜನರು ಭಯ ಪಡುವ ಅಗತ್ಯ ಇಲ್ಲ. ಸೋಂಕಿತರಾದವರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ಯಾರು ಆಸ್ಪತ್ರೆಗೆ ದಾಖಲಾಗಬೇಕು, ಯಾರು ದಾಖಲಾಗಬಾರದು ಎಂದು ಇಂದು ಸಂಜೆ ವಿವರವಾಗಿ ಹೇಳುತ್ತೇನೆ ಎಂದು ಡಾ. ಸುಧಾಕರ್ ಹೇಳಿದರು.
ಈ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಎಲ್ಲಾ ಮಾರ್ಗಗಳ ಬಗ್ಗೆ ಅವಲೋಕನ ಮಾಡಲಾಯಿತು. ಅದರಂತೆ 14 ದಿನಗಳ ಕಾಲ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ನೈಟ್ ಕರ್ಫ್ಯೂ ಅವಧಿ ವಿಸ್ತರಣೆ, ವೀಕೆಂಡ್ ಕರ್ಫ್ಯೂ ಸೇರಿ ಹಲವು ಕ್ರಮಗಳನ್ನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಹೀಗಾಗಿ 14 ದಿನ ಬಿಗಿ ಕ್ರಮಕ್ಕೆ ಸರ್ಕಾರ ಒತ್ತು ನೀಡಿದೆ. ರಾಜ್ಯದ ಜನರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ.