ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಧನ್ಯವಾದ ಅರ್ಪಿಸಿದ ಡಿಸಿಎಂ ಲಕ್ಷ್ಮಣ ಸವದಿ | ಜನತಾ ನ್ಯೂಸ್
ಬೆಂಗಳೂರು : ಸರ್ಕಾರದ ಮನವಿಗೆ ಓಗೊಟ್ಟು ಇಂದು ಸಂಜೆಯ ವೇಳೆಗೆ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಸುಮಾರು 13 ಸಾವಿರದಷ್ಟು ಬಸ್ಸುಗಳು ಸಂಚರಿಸಿರುವುದರಿಂದ ಸಾರ್ವಜನಿಕರು ಸಮಾಧಾನ ಪಡುವಂತಾಯಿತು. ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಈ ಬಗ್ಗೆ ನಾನು ಧನ್ಯವಾದಗಳನ್ನು ತಿಳಿಸಬಯಸುತ್ತೇನೆ, ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಯವರು ಹೇಳಿದ್ದಾರೆ.
ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಾರಿಗೆ ನೌಕರರು ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಸುಮಾರು 13 ಸಾವಿರಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುವಂತಾಗಿ ಕೋವಿಡ್ನಂತಹ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾರಿಗೆ ಸೇವೆ ಲಭ್ಯವಾಗಿ ನಿಟ್ಟುಸಿರು ಬಿಡುವಂತಾಯಿತು. ಹೀಗೆ ಕರ್ತವ್ಯ ಪ್ರಜ್ಞೆ ಮೆರೆದವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ಅದೇರೀತಿ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕೆಂದು ಖಾಸಗಿ ವಾಹನ ಮಾಲೀಕರಲ್ಲಿ ಕೋರಿಕೊಂಡಾಗ ಅವರೂ ಸಹ ತುಂಬು ಹೃದಯದಿಂದ ಸಹಕಾರ ನೀಡಿದ್ದನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ, ಎಂದಿದ್ದಾರೆ.
ನಾಳೆಯಿಂದ ನಮ್ಮ ನೌಕರ ಬಾಂಧವರ ಸಹಕಾರದಿಂದ ಸಾರಿಗೆ ಸೇವೆಯು ಬಹುತೇಕ ಪೂರ್ಣಪ್ರಮಾಣದಲ್ಲಿ ಸುಗಮಗೊಳ್ಳುತ್ತದೆ ಎಂಬ ವಿಶ್ವಾಸ ಮೂಡುವಂತಾಗಿರುವುದು ಸಂತೋಷದ ಸಂಗತಿಯಾಗಿದೆ. ಮುಷ್ಕರದ ಸಂದರ್ಭದಲ್ಲಿಯೂ ಹಲವು ಮಂದಿ ಸಾರಿಗೆ ನೌಕರರು ಸರ್ಕಾರದ ಮನವಿಗೆ ಸ್ಪಂದಿಸಿ ಕರ್ತವ್ಯಪ್ರಜ್ಞೆ ಮೆರೆದು ಸಾರ್ವಜನಿಕರಿಗೆ ಈ ಸಂಕಷ್ಟದ ಕಾಲದಲ್ಲಿಯೂ ಸೇವೆ ಒದಗಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಇಂತಹವರ ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮವನ್ನು ನಾವು ಎಂದಿಗೂ ಮರೆಯುವುದಿಲ್ಲ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವತ್ತ ನಮ್ಮ ಸರ್ಕಾರ ಯಾವತ್ತೂ ಸಹಾನುಭೂತಿ ಹೊಂದಿರುತ್ತದೆ ಎಂಬುದನ್ನು ಮತ್ತೊಮ್ಮೆ ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇನೆ, ಎಂದು ಆಶ್ವಾಸನೆ ನೀಡಿದ್ದಾರೆ.
ಇಡೀ ದೇಶದಲ್ಲೇ ನಮ್ಮ ಸಾರಿಗೆ ನಿಗಮಗಳಿಗೆ ವಿಶೇಷವಾದ ವರ್ಚಸ್ಸಿದೆ. ಈ ವರ್ಚಸ್ಸನ್ನು ಬೆಳೆಸುವಲ್ಲಿ ಅನೇಕ ಮಹಾನೀಯರುಗಳ ಪರಿಶ್ರಮ ಮತ್ತು ಕೊಡುಗೆಗಳಿವೆ. ಆದ್ದರಿಂದ ಅವರ ಶ್ರಮವನ್ನು ಗೌರವಿಸುತ್ತಾ, ನಾಡಿನಲ್ಲಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಎಲ್ಲಾ ನೌಕರರ ಜವಾಬ್ದಾರಿಯಾಗಿದೆ. ಇದರಿಂದ ಕರ್ನಾಟಕದ ಸರ್ಕಾರಿ ಸಾರಿಗೆಯ ಗತ ವೈಭವ ಮತ್ತೆ ಮರುಕಳಿಸಲು ಸಾಧ್ಯವಾಗುತ್ತದೆ, ಎಂದು ಆಶಿಸಿದರು.