ಬೈಕ್ಗೆ ನಾಯಿ ಕಟ್ಟಿ ಎಳೆದುಕೊಂಡು ಹೋದ ನೀಚರು | ಜನತಾ ನ್ಯೂಸ್
ಮಂಗಳೂರು : ಬಡಪಾಯಿ ನಾಯಿಯನ್ನು ಕಿಡಿಗೇಡಿಗಳು ಬೈಕ್ಗೆ ಕಟ್ಟಿ ಹೆದ್ದಾರಿಯಲ್ಲಿ ಎಳೆದುಕೊಂಡು ಹೋಗಿ ರಾಕ್ಷಸತನ ಮೆರೆದಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ನೀಲಪ್ಪ ಎಂಬಾತನನ್ನು ಸದ್ಯ ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶೀಘ್ರದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಹೊರವಲಯದ ಸುರತ್ಕಲ್ ಸಮೀಪದ ಎನ್ ಐಟಿಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿಯನ್ನು ಬೈಕ್ ಗೆ ಕಟ್ಟಿಕೊಂಡು ಹೋಗಿ ಅಮಾನವೀಯವಾಗಿ ವರ್ತಿಸಿದ್ದರು.
ಎನ್ ಐ ಟಿ ಕೆ ಸರ್ವಿಸ್ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಬೈಕ್ ಸವಾರ ನಾಯಿ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗುವ ದೃಶ್ಯವನ್ನು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರು ಸೆರೆ ಹಿಡಿದಿದ್ದಾರೆ.
ಮೂಕ ಪ್ರಾಣಿ ಮೇಲೆ ವಿಕೃತಿ ಮೆರೆದ ಈ ದೃಶ್ಯವನ್ನು ಹಿಂದೆ ಬರುತ್ತಿದ್ದ ಬೈಕ್ ಸವಾರರು ಚಿತ್ರೀಕರಿಸಿ ಪ್ರಾಣಿ ದಯಾ ಸಂಘದ ಜೊತೆ ಹಂಚಿಕೊಂಡಿದ್ದರು. ಅಲ್ಲದೆ ಈ ಸಂಬಂಧ ಸುರತ್ಕಲ್ ಠಾಣೆಗೆ ದೂರನ್ನೂ ನೀಡಲಾಗಿತ್ತು.
ಕೇರಳದಲ್ಲಿ ಚಪ್ಪಲಿ ಕಚ್ಚಿದ ಕಾರಣಕ್ಕಾಗಿ ವ್ಯಕ್ತಿ ನಾಯಿಯನ್ನು ಇದೇ ರೀತಿ ಎಳೆದುಕೊಂಡು ಹೋದ ವಿಚಾರ ಇಡೀ ದೇಶಾದ್ಯಾಂತ ಸುದ್ದಿಯಾಗಿತ್ತು. ಮನಷ್ಯನದ ರಕ್ಕಸ ಪ್ರವೃತ್ತಿ ಬಗ್ಗೆ ತೀರಾ ಆಕ್ರೋಶ ವ್ಯಕ್ತವಾಗಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ನಗರದಲ್ಲಿಯೂ ಇದೇ ರೀತಿ ಅಮಾನವೀಯ ನಡೆ ಕಂಡು ಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರ್ ಆಗುತ್ತಿದ್ದು, ಅಮಾನವೀಯವಾಗಿ ವರ್ತಿಸಿರುವ ವ್ಯಕ್ತಿಗಳಿಗೆ ನೆಟ್ಟಿಗರು ಶಪಿಸುತ್ತಿದ್ದಾರೆ.