ಹಂಪಿಯ ಬಡವಿಲಿಂಗ ಅರ್ಚಕ ಕೆ.ಎನ್.ಕೃಷ್ಣ ಭಟ್ ನಿಧನ! | ಜನತಾ ನ್ಯೂಸ್
ಬಳ್ಳಾರಿ : ಶಿವಪೀಠದ ಮೇಲೇರಿ ನಿತ್ಯವೂ ಪೂಜೆ ಸಲ್ಲಿಸಿ ಜಗತ್ತಿನ ಗಮನ ಸೆಳೆದವರು ಹಂಪಿಯ ಬಡವಿಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್.
ಹಂಪಿಯ ಬಡವಿಲಿಂಗ ದೇವಸ್ಥಾನದ ಅರ್ಚಕರಾದ ಶ್ರೀ ಕೃಷ್ಣ ಭಟ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅರ್ಚಕ ಕೃಷ್ಣ ಭಟ್ (87) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ಬೆಳಿಗ್ಗೆ ಹಂಪಿಯ ಅವರ ಮನೆಯಲ್ಲಿ ನಿಧನ ಹೊಂದಿದರು.
ಕೃಷ್ಣ ಭಟ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿಯವರು. 1979ರಲ್ಲಿ ಹಂಪಿಗೆ ಬಂದು ನೆಲೆಸಿದರು. ಅಂದಿನಿಂದ ಸತತವಾಗಿ 2020ನೇ ಸಾಲಿನ ನವೆಂಬರ್ ವರೆಗೆ ಒಂದು ದಿನವೂ ತಪ್ಪಿಸದೇ ಹಂಪಿ ಬಡವಿಲಿಂಗಕ್ಕೆ ಪೂಜೆ ನೆರವೇರಿಸಿದ್ದಾರೆ.
ನೀರಿನೊಳಗೆ ಇರುವ ಈ ಶಿವಲಿಂಗ ಏಕಶಿಲಾ ಮೂರ್ತಿಯಾಗಿದೆ. ಸುಮಾರು ಮೂರು ಮೀಟರ್ ಎತ್ತರದ ಇದನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೆತ್ತಲಾಗಿದೆ. ಇದನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದ್ದು, 3 ಮೀಟರ್ ಎತ್ತರವಿದೆ. ಶಿವಲಿಂಗವು ಮೂರು ಕಣ್ಣಿನ ಗುರುತುಗಳನ್ನು ಹೊಂದಿದೆ. ಮೂರು ಕಣ್ಣುಗಳು ಶಿವನ ಮೂರು ಕಣ್ಣುಗಳನ್ನು ಪ್ರತಿನಿಧಿಸುತ್ತದೆ.
ಈ ದೇವಾಲಯಕ್ಕೆ ಸೂರಿಲ್ಲ. ಸೂರ್ಯನ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಮಳೆಗಾಲದಲ್ಲಿ ಮಳೆ ನೀರು ಒಳಕ್ಕೆ ಸುರಿಯುತ್ತದೆ. ಸುಮಾರು 9 ಅಡಿ ಎತ್ತರದ ಚಾವಣಿ ಇರದ ಏಕಶಿಲೆಯ ಈ ಬಡವಿ ಲಿಂಗದ ದೇವಾಲಯದ ಒಳಾಂಗಣ ವರ್ಷವಿಡೀ ನೀರಿನಿಂದ ಆವೃತವಾಗಿರುತ್ತದೆ. ನಡುಗುವ ದೇಹಕ್ಕೆ ಒಂದು ತುಂಡು ಪಂಚೆಯನ್ನು ಸುತ್ತಿಕೊಂಡು ಅವರ ಮಂಡಿವರೆಗೂ ಇರುವ ನೀರಿಗೆ ಇಳಿದು, 3 ಅಡಿ ನೀರಿನಲ್ಲಿ ಮಳುಗಿರುವ ಲಿಂಗದ ಪೀಠಕ್ಕೆ ಕಾಲೂರಿ, 9 ಅಡಿಯ ಲಿಂಗದ ಮೇಲ್ಭಾಗವನ್ನು ಶುಚಿಗೊಳಿಸುವ ಅವರ ಸಾಹಸವನ್ನು ನೋಡುವುದೇ ಒಂದು ರೋಮಾಂಚನ ವಾಗಿತ್ತು.