ವೆಂಟಿಲೇಟರ್ ಇದ್ದರೂ ಬಳಕೆ ಮಾಡಿಲ್ಲ, ಆಕ್ಸಿಜನ್ ಕೊರತೆಯಿಂದ 4 ಮಂದಿ ಸಾವು, ಜಿಲ್ಲಾ ಶಸ್ತ್ರಚಿಕಿತ್ಸಕರ ತಲೆದಂಡ! | ಜನತಾ ನ್ಯೂಸ್
ಕೋಲಾರ : ಆಕ್ಸಿಜನ್ ಸಮಸ್ಯೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ 4 ಮಂದಿ ಸೋಂಕಿತರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜಿಲ್ಲಾ ಶಸ್ತ್ರಚಿಕಿತ್ಸಕ, ಆರ್.ಎಂ.ಒ ರನ್ನು ಸಸ್ಪೆಂಡ್ ಮಾಡಿದ್ದಾರೆ.
ಸೋಂಕಿತರ ಸಾವಿನ ಬೆನ್ನಲ್ಲೇ ಸೋಮವಾರ ರಾತ್ರಿ ಆಸ್ಪತ್ರೆಗೆ ದೌಡಾಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ಮತ್ತು ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ (ಆರ್ಎಂಒ) ಡಾ.ನಾರಾಯಣಸ್ವಾಮಿ ಅವರ ಅಮಾನತಿಗೆ ಆದೇಶಿಸಿದರು. ಜತೆಗೆ ಅವರ ವಿರುದ್ಧ ಇಲಾಖಾ ತನಿಖೆಗೆ ಸೂಚನೆ ನೀಡಿದರು.
ಪ್ರಕರಣ ಸಂಬಂಧ ಅಹೋರಾತ್ರಿ ವೈದ್ಯಕೀಯ ಸಿಬ್ಬಂದಿಯ ಸಭೆ ನಡೆಸಿದ ಸಚಿವರು, ಬೆಂಗಳೂರಿನಲ್ಲಿ ಸದ್ಯ ಕನಿಷ್ಠ ಒಂದು ವೆಂಟಿಲೇಟರ್ ಪಡೆಯಲು ಹರಸಾಹಸ ಪಡೆಯಬೇಕಿದೆ. ಆದರೆ, ಎಸ್ಎನ್ಆರ್ ಆಸ್ಪತ್ರೆಗೆ ಪೂರೈಕೆಯಾಗಿರುವ 40 ವೆಂಟಿಲೇಟರ್ಗಳಲ್ಲಿ ಒಂದನ್ನೂ ಬಳಕೆ ಮಾಡುತ್ತಿಲ್ಲ. ಇದು ದೊಡ್ಡ ಲೋಪ ಎಂದು ಕೆಂಡಾಮಂಡಲರಾದರು.
ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿಕೆಯಲ್ಲಿ ಕೆಲ ಲೋಪಗಳಾಗಿವೆ. ಸೋಂಕಿತರ ಆರೈಕೆಗಾಗಿ ಅವರ ಕುಟುಂಬ ಸದಸ್ಯರಿಗೆ ಐಸಿಯುನಲ್ಲಿ ಇರಲು ಅವಕಾಶ ನೀಡಿರುವುದು ತಪ್ಪು. ಈ ರೀತಿಯ ವ್ಯವಸ್ಥೆಯನ್ನು ಯಾವುದೇ ಆಸ್ಪತ್ರೆಯಲ್ಲಿ ನೋಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ಪ್ರತಿನಿತ್ಯ 10 ರಿಂದ 11 ಜನರು ಸಾಯುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಅಟೆಂಡರ್ ಇಟ್ಟಿದ್ದಾರೆ. ರೋಗಿಗಳಿಗೆ ಅಟೆಂಡರ್ ರಾಜ್ಯದಲ್ಲಿ ಎಲ್ಲೂ ಇಲ್ಲ, ಇದು ತಪ್ಪು. ಕೊರೊನಾ ನಿರ್ವಹಣೆಗೆ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಅಂತೆಯೇ ನಿನ್ನೆ ನಡೆದ ಆಕ್ಸಿಜನ್ ಸರಬರಾಜಲ್ಲಿ ಆದ ದೋಷ ಕುರಿತು ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳಿಂದ ನಿರ್ವಹಣೆ ಮಾಡುತ್ತಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಆರ್.ಎಂ.ಓ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.