ಜಾಹಿರಾತಿನಲ್ಲಿ ರಾಹುಲ್, ಸೋನಿಯಾ ಅಪಹಾಸ್ಯ ಆರೋಪ : ಕಚೇರಿಯೊಂದನ್ನು ಧ್ವಂಸಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರು | ಜನತಾ ನ್ಯೂಸ್
ಮುಂಬೈ : ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಅಪಹಾಸ್ಯ ಮಾಡಿದ್ದಾರೆ, ಎಂಬ ಆರೋಪದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ತಂಪು ಪಾನೀಯದ ಕಂಪನಿ ಕಚೇರಿ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಛೇರಿಯನ್ನು ಭಾಗಶಃ ದ್ವಂಸಗೊಳಿಸಿದ್ದಾರೆ. ಈ ನಡೆಯ ಕುರಿತು ಲಾಕ್ ಡೌನ್ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯೊಂದನ್ನು ದರೋಡೆ ಮಾಡುತ್ತಿದ್ದಾರೆ, ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಜಾಹಿರಾತು ಒಂದರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಹೋಲುವ ಪಾತ್ರಗಳನ್ನು ಹೊಂದಿರುವ ಕಾರಣ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ತಂಪು ಪಾನೀಯ ಕಚೇರಿಗೆ ನುಗ್ಗಿ ದಾಂದಲೇ ನಡೆಸಿದ್ದಾರೆ. ಈ ಕುರಿತು ಘೋಷಣೆ ಕೂಗಿದ ಕಾರ್ಯಕರ್ತರು ಕಚೇರಿಯ ಗಾಜುಗಳು ಹಾಗೂ ಪಿಟೋಪಕರಣಗಳನ್ನು ದ್ವಂಸಗೊಳಿಸಿದ್ದಾರೆ. ಬಳಿಕ ಪೊಲೀಸರು ಈ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯ ಪಾನೀಯ ಕಂಪನಿ ಸ್ಟೋರಿಯಾ ತನ್ನ ಹೊಸ ಶ್ರೇಣಿಯ ಪಾನೀಯಗಳಿಗಾಗಿ ಇತ್ತೀಚೆಗೆ ಪ್ರಾರಂಭಿಸಿದ ಜಾಹೀರಾತು ಅಭಿಯಾನಗಳಲ್ಲಿ, ಮೂರು ಜಾಹೀರಾತುಗಳನ್ನು ಹಾಸ್ಯಮಯ ವಿಡಂಬನೆಗಳಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಒಂದು ಜಾಹಿರಾತಿನಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಹೋಲುವ ಪಾತ್ರಗಳನ್ನು ಹೊಂದಿರುವ ಕಾರಣ, ತಮ್ಮ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಅಪಹಾಸ್ಯ ಮಾಡಿದ್ದಾರೆ, ಎಂದು ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಜಾಹೀರಾತಿನಲ್ಲಿ, ತನ್ನ ಮಿಲ್ಕ್ ಶೇಕ್ ಮುಗಿದಿದೆ ಎಂದು ಅಸಮಾಧಾನಗೊಂಡಿರುವ ತಾಯಿಯನ್ನು ಮಗನೊಬ್ಬ ಸಮಾಧಾನಪಡಿಸುತ್ತಾನೆ. ಮತ್ತು ಹುಲ್ಲು ಒಂದು ಕಡೆಯಿಂದ ಹಾಕಿದರೆ ಇನ್ನೊಂದು ಕಡೆಯಿಂದ ಹಾಲು ಹೊರ ಬರುವ ಯಂತ್ರ(ಆಗೆ ಸೆ ಘಾಸ್, ಪೀಚೆ ಸೆ ದೂಧ್) ತಯಾರಿಸುವುದಾಗಿ ಹೇಳುತ್ತಾನೆ. ಇದಕ್ಕೆ, ನಿರಾಶೆಗೊಂಡ ತಾಯಿ ಅದನ್ನು ಯಂತ್ರ ಅಲ್ಲ, ಬದಲಿಗೆ ಗಾಯ್(ಹಸು) ಎನ್ನುತ್ತಾರೆ ಎಂದು ಹಣೆ ಜಜ್ಜಿ ಕೊಳ್ಳುತ್ತಾಳೆ. ಅದಕ್ಕೆ ಮಗ, ಈ ಗಾಯ್ ಯಾರು? ಅವರಿಗೆ ಅಧಿಕಾರವಿದೆಯೇ ಎಂದು ಪ್ರಶ್ನಿಸುತ್ತಾನೆ.