ರೈತನೊಬ್ಬ ಅಕ್ಕಿ ಕೇಳಿದ್ದಕ್ಕೆ ಸತ್ತು ಹೋಗು ಎಂದ ಉಮೇಶ್ ಕತ್ತಿ, ವಿಷಾದ ವ್ಯಕ್ತಪಡಿಸಿದ ಬಿಎಸ್ವೈ | ಜನತಾ ನ್ಯೂಸ್
ಬೆಂಗಳೂರು : ಸರ್ಕಾರ ನೀಡುತ್ತಿದ್ದ ಐದು ಕೆಜಿ ಅಕ್ಕಿ ಬದಲಾಗಿ ಎರಡು ಕೆಜಿ ನೀಡಿರುವುದನ್ನು ಪ್ರಶ್ನಿಸಿ ರೈತರೊಬ್ಬರು ಕರೆ ಮಾಡಿದ್ದ ಸಂದರ್ಭದಲ್ಲಿ ಸತ್ತು ಹೋಗು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸಿಎಂ ಬಿಎಸ್ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಸಚಿವ ಉಮೇಶ್ ಕತ್ತಿ ಆಹಾರ ಮತ್ತು ನಾಗರೀಕ ಖಾತೆ ಸಚಿವರು ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದು ಸಾಯಬೇಕೇ ಬದುಕಬೇಕೇ ಎಂದು ಕೇಳಿದ್ದಕ್ಕೆ ಸಾಯಿ ಎಂದು ಹೇಳಿರುವುದು ಒಬ್ಬ ಸಚಿವನಾಗಿ ಸರಿಯಲ್ಲ.ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು.ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಯಡಿಯೂರಪ್ಪ ತಿಳಿಸಿದ್ದಾರೆ.
ಪಡಿತರ ಚೀಟಿದಾರರಿಗೆ ಅಕ್ಕಿ ಕಡಿತ ಮಾಡಿರುವ ಕುರಿತು ಸಚಿವ ಉಮೇಶ್ ಕತ್ತಿಯನ್ನು ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ನಿವಾಸಿ, ರೈತ ಸಂಘದ ಕಾರ್ಯಕರ್ತ ಈಶ್ವರ್ ಪ್ರಶ್ನಿಸಿದ್ದಾರೆ.
ರೈತ ಈಶ್ವರ್: ಇಂತಹ ಸಂದರ್ಭದಲ್ಲಿ ಪಡಿತರ ಚೀಟಿದಾರರಿಗೆ ತಲಾ 2 ಕೆಜಿ ಅಕ್ಕಿ ಸಾಲುತ್ತಾ?
ಉಮೇಶ್ ಕತ್ತಿ: 3 ಕೆಜಿ ರಾಗಿ ಮಾಡಿದ್ದೀವಲ್ಲ?
ರೈತ ಈಶ್ವರ್: ಉತ್ತರ ಕರ್ನಾಟಕದ ಜನತೆಗೆ ರಾಗಿ ಹೇಗೆ ಕೂಡುತ್ತೀರಾ?
ಉಮೇಶ್ ಕತ್ತಿ: ಉತ್ತರ ಕರ್ನಾಟಕಕ್ಕೆ ರಾಗಿ, ಜೋಳ ಮಾಡಿದ್ದೇವೆ
ರೈತ ಈಶ್ವರ್: ಲಾಕ್ಡೌನ್ ಇದೆ, ದುಡಿಮೆ ಇಲ್ಲಾ…
ಉಮೇಶ್ ಕತ್ತಿ: ಲಾಕ್ಡೌನ್ ಹಿನ್ನೆಲೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 5 ಕೆಜಿ ಅಕ್ಕಿ ಕೊಡಲಿದೆ. ಮುಂದಿನ ತಿಂಗಳಿಂದ ಕೊಡುತ್ತೇವೆ
ರೈತ ಈಶ್ವರ್: ಅಲ್ಲಿಯವರೆಗೆ ಸತ್ತು ಹೋಗೋದಾ ಅಥವಾ ಉಪವಾಸ ಇರೋದಾ?
ಉಮೇಶ್ ಕತ್ತಿ: ಸತ್ತು ಹೋಗುವುದು ಒಳ್ಳೆಯದು. ಅದಕ್ಕಿಂತ ಪೂರ್ವದಲ್ಲಿ ಅಕ್ಕಿ ಮಾರಾಟ ಮಾಡೋದು ಬಿಡಿ, ನನಗೆ ಫೋನ್ ಮಾಡಬೇಡಿ.
ರೈತ ಈಶ್ವರ್: ಸರ್ ಫೋನ್ ಮಾಡ್ಬೇಡಿ ಅನ್ಬೇಡಿ. ನೀವು ಜನಪ್ರತಿನಿಧಿಗಳು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮಾತನಾಡಿದಾಗ ಉತ್ತರಿಸಬೇಕು.
ಈ ಮಾತು ವಿವಾದಕ್ಕೀಡಾಗುತ್ತಿದ್ದಂತೆ ಎಚ್ಚೆತ್ತ ಸಚಿವ ಉಮೇಶ್ ಕತ್ತಿ ಸಮರ್ಥನೆ ಮಾಡಿಕೊಂಡಿದ್ದಾರೆ. ಕಾಳಸಂತೆಯಲ್ಲಿ ಅಕ್ಕಿ ದಂಧೆ ಮಾಡ್ತಿದ್ದಾರೆ ಅದನ್ನು ನಾನು ಕೇಳಿದ್ದೆ. ಅಕ್ಕಿ ಕಡಿತ ಮಾಡಿದ್ದಾರೆ ಸಾಯಬೇಕೋ ಅಂತಾ ಆತ ಕೇಳಿದ, ಸತ್ತು ಹೋಗಪ್ಪಾ ಅಂದೆ. ಅವನು ಸಾಯ್ತೀನಿ ಅಂದ್ರೆ ನಾನೇನು ಉತ್ತರ ಕೊಡಲಿ ಎಂದಿದ್ದಾರೆ. ಲಾಕ್ಡೌನ್ ಪರಿಸ್ಥಿತಿಯಲ್ಲಿ ಮೇ- ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಪಡಿತರ ವಿತರಣೆ ಮಾಡುತ್ತೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.