ತಾಯಿ, ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆಗೈದ ವ್ಯಕ್ತಿ! | ಜನತಾ ನ್ಯೂಸ್
ಮೈಸೂರು : ವ್ಯಕ್ತಿಯೊಬ್ಬ ತನ್ನ ತಾಯಿ, ಗರ್ಭಿಣಿ ಪತ್ನಿ ಹಾಗೂ ಮುದ್ದಾದ ಇಬ್ಬರು ಮಕ್ಕಳನ್ನು ನಿರ್ದಯವಾಗಿ ಕೊಂದಿರುವ ಅಮಾನವೀಯ ಘಟನೆ ಸರಗೂರು ತಾಲ್ಲೂಕಿನ ಸ್ವಾಮಿಗೌಡನಹುಂಡಿಯಲ್ಲಿ ನಡೆದಿದೆ. ಈ ಭೀಕರ ಹತ್ಯೆಯ ದೃಶ್ಯ ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಅತ್ತೆ ಕೆಂಪಾಜಮ್ಮ (60), ಗರ್ಭಿಣಿ ಪತ್ನಿ ಗಂಗಾ(28), ಇಬ್ಬರು ಗಂಡು ಮಕ್ಳಳಾದ ರೋಹಿತ್ (4) ಮತ್ತು ಸಾಮ್ರಾಟ್ (2) ಕೊಲೆಯಾದ ದುರ್ದೈವಿಗಳು. ಈ ನಾಲ್ವರನ್ನೂ ಆರೋಪಿ ಮಣಿಕಂಠಸ್ವಾಮಿ ಕೊಲೆ ಮಾಡಿದ್ದಾನೆ.
ಗಾರೆ ಕೆಲಸ ಮಾಡಿಕೊಂಡಿದ್ದ ಮಣಿಕಂಠಸ್ವಾಮಿಗೆ ಕುಡಿತದ ಚಟ ಇತ್ತು. ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಈತ, ಕುಡಿದ ಅಮಲಿನಲ್ಲಿ ಅತ್ತೆ, ಹೆಂಡತಿ, ಇಬ್ಬರು ಮಕ್ಕಳ ತಲೆಯನ್ನು ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ನಾಲ್ವರು ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಣಿಕಂಠಸ್ವಾಮಿ ತಲೆ ಮರೆಸಿಕೊಂಡಿದ್ದಾನೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಬಂಧ ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.