ಶವ ಸಂಸ್ಕಾರಕ್ಕೆ ಕ್ಯೂ, ಲಂಚ ಕೊಡಬೇಕಾದ ಪರಿಸ್ಥಿತಿ, ಇದು ಸುಳ್ಳಾ? : ಬಿಎಸ್ವೈ ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ | ಜನತಾ ನ್ಯೂಸ್
ಬೆಂಗಳೂರು : ಕೋವಿಡ್ ನಿರ್ವಹಣೆಯಲ್ಲಿ ಬಿಎಸ್ಯಡಿಯೂರಪ್ಪ ನೇತ್ರತ್ವದ ರಾಜ್ಯ ಸರ್ಕಾರ ವೈಪಲ್ಯವನ್ನು ಎತ್ತಿಹಿಡಿಯುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರಿಗೆ, ರಾಜ್ಯ ಬಿಜೆಪಿ ನಾಯಕರು ಟೀಕೆ ಮಾಡುತ್ತಾರೆ ಎಂದಿದ್ದಕ್ಕೆ ಸಿದ್ದರಾಮಯ್ಯ ಇಂದು ತಿರುಗೇಟು ನೀಡಿದ್ದಾರೆ.
ರೋಗಿಗಳಿಗೆ ಆಕ್ಸಿಜನ್, ಐಸಿಯು ಹಾಸಿಗೆಗಳು, ಆಂಬುಲೆನ್ಸ್ ಗಳು ಅಗತ್ಯ ಸಮಯದಲ್ಲಿ ಸಿಗುತ್ತಿಲ್ಲ ಎಂದು ಸತ್ಯ ಹೇಳಿದರೆ ರಾಜ್ಯ ಬಿಜೆಪಿ ನಾಯಕರು ನಾನು ಟೀಕೆ ಮಾಡುತ್ತಿದ್ದೇನೆ ಅಂತಾರೆ. ಶವ ಸಂಸ್ಕಾರ ಮಾಡಲು ಕ್ಯೂನಲ್ಲಿ ನಿಲ್ಲಬೇಕಾದ, ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಇದು ಸುಳ್ಳಾ? ಇದನ್ನು ಹೇಳಿದ್ರೆ ಟೀಕೆಯಾಗುತ್ತಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಸರ್ಕಾರ ಕೊರೊನಾ ಇಂದ ಸಾವಿಗೀಡಾದ ಜನರ ನಿಜ ಲೆಕ್ಕವನ್ನು ಮುಚ್ಚಿಟ್ಟು, ಜನರಿಗೆ ಸುಳ್ಳು ಹೇಳುತ್ತಿದೆ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬಿಡುಗಡೆ ಮಾಡುವ ಮೃತರ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಬಿಜೆಪಿ ಸರ್ಕಾರ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿದ್ದರೆ ಜನ ಹೀಗೆ ಸಾಯುವ ಸನ್ನಿವೇಶ ಬರುತ್ತಿತ್ತಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಬಡ ರೈತನೊಬ್ಬನಿಗೆ ಹೊಟ್ಟೆಗಿಲ್ಲದಿದ್ದರೆ ಸಾಯೋದೆ ಒಳ್ಳೆಯದು, ಎಂಬ ಉಡಾಫೆ ಉತ್ತರ ನೀಡಿರುವ ಉಮೇಶ್ ಕತ್ತಿ ಸಚಿವನಾಗಿ ಮುಂದುವರೆಯಲು ನಾಲಾಯಕ್. ಕತ್ತಿ ಪರವಾಗಿ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸುವ ಬದಲು ಮಂತ್ರಿಮಂಡಲದಿಂದ ಕೈಬಿಡಬೇಕಿತ್ತು. ಇಂತಹ ಅಯೋಗ್ಯರನ್ನು ಇಟ್ಟುಕೊಂಡು ಸರ್ಕಾರ ಬಡವರ ಪರವಾಗಿ ಕೆಲಸ ಮಾಡಲು ಆಗುತ್ತಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಲಾಕ್ಡೌನ್ ನಿಂದಾಗಿ ಜನ ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದಾರೆ, ಅಗತ್ಯ ವಸ್ತುಗಳನ್ನು ಕೊಳ್ಳಲು ಅವರ ಬಳಿ ಹಣವಿಲ್ಲ. ಹಾಗಾಗಿ ರಾಜ್ಯ ಬಿಜೆಪಿ ಸರ್ಕಾರ ಪ್ರತೀ ವ್ಯಕ್ತಿಗೆ ತಲಾ ಹತ್ತು ಕೆ.ಜಿ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ತಕ್ಷಣ ವಿತರಿಸಬೇಕು ಎಂದು ಬಿಎಸ್ವೈ ಅವರನ್ನು ಒತ್ತಾಯಿಸುತ್ತೇನೆ, ಎಂದು ಹೇಳಿದ್ದಾರೆ.