ಗುರುದ್ವಾರ ಗಂಜ್ ಸಾಹಿಬ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ | ಜನತಾ ನ್ಯೂಸ್
ನವದೆಹಲಿ: : ಸಿಖ್ ಧರ್ಮೀಯರ 9ನೇ ಧಾರ್ಮಿಕ ಗುರು ಗುರು ತೇಜ್ ಬಹದ್ದೂರ್ ಅವರ 400 ನೇ ಜಯಂತ್ಯೋತ್ಸವ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ದೆಹಲಿಯಲ್ಲಿರುವ ಗುರುದ್ವಾರ ಗಂಜ್ ಸಾಹಿಬ್ ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
400ನೇ ಪ್ರಕಾಶ್ ಪುರಬ್ ದಿನದಂದು ನಾನು ಶ್ರೀ ಗುರು ತೇಜ್ ಬಹದ್ದೂರ್ ಅವರಿಗೆ ತಲೆ ಬಾಗುತ್ತೇನೆ. ಅವರ ಧೈರ್ಯ ಮತ್ತು ದೀನ ದಲಿತರಿಗೆ ಸೇವೆ ಸಲ್ಲಿಸುವ ಗುಣಗಳಿಂದಾಗಿ ಜಾಗತಿಕವಾಗಿ ಅವರನ್ನು ಗೌರವಿಸಲಾಗುತ್ತದೆ. ದಬ್ಬಾಳಿಕೆ ಮತ್ತು ಅನ್ಯಾಯಕ್ಕೆ ತಲೆಬಾಗಲು ಅವರು ನಿರಾಕರಿಸಿದ್ದರು ಮತ್ತು ಅವರ ಸರ್ವೋಚ್ಚ ತ್ಯಾಗ ಅನೇಕರಿಗೆ ಶಕ್ತಿ ಮತ್ತು ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ಸ್ಮರಿಸಿದ್ದಾರೆ.
ಯಾವುದೇ ಭದ್ರತೆ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳಿಲ್ಲದೆ ಸರಳವಾಗಿ ಗುರುದ್ವಾರಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ, ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.